ಬೆಂಗಳೂರು: ಹಲಾಲ್ ಎಂಬುದು ‘ಆರ್ಥಿಕ ಜಿಹಾದ್’. ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ಮುಸ್ಲಿಮರು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಡಿರುವ ಹುನ್ನಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಹಲಾಲ್ ಮಾಂಸ ಬಹಿಷ್ಕರಿಸಬೇಕು ಎಂದು ಕೆಲವು ಸಂಘಟನೆಗಳು ನೀಡಿರುವ ಕರೆಗೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಹಲಾಲ್ ಇಸ್ಲಾಂನ ಧಾರ್ಮಿಕ ಕ್ರಿಯೆ. ಅದನ್ನು ಅವರ ದೇವರಿಗೆ ಅರ್ಪಿಸುತ್ತಾರೆ. ಆದ್ದರಿಂದ ಅವರಿಗೆ ಪ್ರಿಯವಾದುದು. ಆದರೆ ಅದು ನಮ್ಮ ದೇವರಿಗೆ ಎಂಜಲು’ ಎಂದು ಹೇಳಿದರು.
‘ಹಲಾಲ್ ಮಾಂಸವನ್ನೇ ಉಪಯೋಗಿಸಿ ಎಂದು ಹೇಳಲು ಹಕ್ಕು ಇದೆಯೋ, ಅದೇ ರೀತಿ ಬಹಿಷ್ಕರಿಸಿ ಎಂದು ಹೇಳುವ ಹಕ್ಕೂ ಇದೆ. ಹಲಾಲ್ ಅನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನಾದರೂ ಇದೆ. ಸಾಮರಸ್ಯವನ್ನು ಹೇರಲು ಬರುವುದಿಲ್ಲ. ಸಾಮರಸ್ಯ ಏಕಮುಖ ಆಗಿರಬಾರದು, ದ್ವಿಮುಖವಾಗಿರಬೇಕು’ ಎಂದು ಹೇಳಿದರು.
‘ಹಿಂದೂಗಳು ನಡೆಸುವ ಮಾಂಸದ ಅಂಗಡಿಗಳಲ್ಲಿ ಅವರು ಮಾಂಸ ಖರೀದಿಸುತ್ತಾರಾ? ಹಾಗಿದ್ದ ಮೇಲೆ ಮುಸ್ಲಿಮರು ನಡೆಸುವ ಅಂಗಡಿಗಳಲ್ಲಿ ತೆಗೆದುಕೊಳ್ಳಬೇಕು ಎಂದು ಏಕೆ ಹೇಳುತ್ತೀರಾ? ಅವರು ಹಲಾಲ್ ಅಲ್ಲದ ಮಾಂಸ ಅವರು ತಿನ್ನಲು ಸಿದ್ಧರಾದರೆ, ಇವರು ಹಲಾಲ್ ಆಗಿರುವ ಮಾಂಸ ತಿನ್ನುತ್ತಾರೆ. ಯಾವುದೋ ಕಾಲದ ನಿಯಮಗಳನ್ನು ಈಗಲೂ ಒಪ್ಪಿಕೊಳ್ಳಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.