ಬೆಂಗಳೂರು: ಕರವಾಳಿಯಲ್ಲಿ ಸತತ ಮೂರನೇ ದಿನವೂ ವರುಣನ ಅಬ್ಬರ ಮುಂದುವರಿದಿದೆ. ಕೊಡಗಿನಲ್ಲಿ ಧಾರಾಕಾರವಾಗಿ ಸುರಿದಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ಉತ್ತಮ ಮಳೆ ಆಗಿದೆ. ರಾಜ್ಯದ ಉಳಿದ ಭಾಗದಲ್ಲಿ ಸಾಧಾರಣವಾಗಿ ಸುರಿದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಳ್ಕೂರಿನಲ್ಲಿ ಗರಿಷ್ಠ 20.9 ಸೆಂ.ಮೀ. ಮಳೆ ಬಿದ್ದಿದೆ. ಕೊಡಗು ಜಿಲ್ಲೆಯಾದ್ಯಂತ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗಿದೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ,ಕೊಪ್ಪಳ ನಗರ ಹಾಗೂ ಹಿಟ್ನಾಳ, ಮುನಿರಾಬಾದ್ ಹೋಬಳಿ, ರಾಯಚೂರಿನ ಮಾನ್ವಿ, ಕವಿತಾಳ ಮತ್ತು ಸಿರವಾರದಲ್ಲಿ ಉತ್ತಮ ಮಳೆಯಾಗಿದೆ. ಧಾರವಾಡ, ಹಾವೇರಿ, ಬೆಳಗಾವಿ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಿದೆ.