ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಸೋಮವಾರ ಬಿರುಸಾಗಿ ಮಳೆ ಸುರಿದಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದೆ.ಕಾರ್ಕಳದಲ್ಲಿ 9.5 ಸೆಂ.ಮೀ., ಉಡುಪಿಯಲ್ಲಿ 6.1 ಸೆಂ.ಮೀ. ಮಳೆ ಸುರಿದಿದೆ. ಉಡುಪಿಯ ಕುತ್ಪಾಡಿ, ಕಾಪುವಿನ ಪಾದೂರು, ಕಳತ್ತೂರು, ಬೈಂದೂರಿನ ಉಪ್ಪುಂದ ಕಾಲ್ತೋಡು, ಕಾರ್ಕಳದ ಬೆಳ್ಮಣ್ಣು ಗ್ರಾಮದಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ 6.1 ಸೆಂ.ಮೀ. ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಆಸನಬಾಳು ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಭದ್ರಾ, ತುಂಗಾ ನದಿಯಲ್ಲಿ ನೀರಿನ ಹರಿವು ತುಸು ಹೆಚ್ಚಿದೆ.
ಎನ್.ಆರ್.ಪುರ, ಕೊಟ್ಟಿಗೆಹಾರ ಭಾಗದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.
ಮಳೆಯ ಆರ್ಭಟ:ಶಿವಮೊಗ್ಗ ಜಿಲ್ಲೆಯ ಹಲವೆಡೆ ಜೋರು ಮಳೆಯಾಗುತ್ತಿದೆ. ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಬಿಡುವಿಲ್ಲದೇ ಮಳೆ ಸುರಿಯುತ್ತಿದ್ದು, ಸಾಗರ, ಸೊರಬದಲ್ಲಿ 5 ಸೆಂ.ಮೀಗಿಂತ ಹೆಚ್ಚು ಮಳೆಯಾಗಿದೆ.
ಉತ್ತಮ ಮಳೆ:ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಉತ್ತಮ ಮಳೆ ಯಾಗಿದೆ. ಹಾಸನ ಜಿಲ್ಲೆಯ ಆಲೂರು, ಅರಕಲಗೂಡು ತಾಲ್ಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ.