ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ಸಂಜೆ ಗುಡುಗು–ಸಿಡಿಲು ಹಾಗೂ ಆಲಿಕಲ್ಲು ಸಮೇತ ಧಾರಾಕಾರ ಮಳೆಯಾಗಿದೆ.
ಗದಗ, ಬೆಳಗಾವಿ, ವಿಜಯಪುರ, ಧಾರವಾಡ, ಬಳ್ಳಾರಿ ಜಿಲ್ಲೆಗಳ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಸಂಡೂರು ತಾಲ್ಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳಗಾವಿ ನಗರ ಹಾಗೂ ತಾಲ್ಲೂಕಿನ ವಿವಿಧೆಡೆ, ಹುಕ್ಕೇರಿ, ಗೋಕಾಕ, ಚಿಕ್ಕೋಡಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಉತ್ತಮ ಮಳೆ: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಸಂಪಾಜೆ ಭಾಗದಲ್ಲಿಯೂ ಧಾರಾಕಾರ ಮಳೆಯಾಗಿದೆ.
ಧಾರಾಕಾರ ಮಳೆ: ಕೊಡಗು ಜಿಲ್ಲೆಯ ಸುಂಟಿಕೊಪ್ಪ, ಕುಶಾಲನಗರ, 7ನೇ ಹೊಸಕೋಟೆ, ಕಕ್ಕಬ್ಬೆ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಬಕ್ಕ, ಚೇರಂಬಾಣೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿದಿದೆ.
ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ವಿವಿಧೆಡೆ ಮಧ್ಯಾಹ್ನ ಆಲಿಕಲ್ಲು ಸಮೇತ ಜೋರಾದ ಮಳೆ ಸುರಿಯಿತು.ತಾಲ್ಲೂಕಿನ ಹಿರೋಳಿ, ಸರಸಂಬಾ, ಭೀಮಪುರ, ಹೊನ್ನಳಿ, ಹೆಬಳಿ, ಮಟಕಿ, ಹೊಸಳ್ಳಿ, ಸಾಲೇಗಾಂವ, ಕೊಡಲ ಹಂಗರಗಾ, ಕೊರಳ್ಳಿ, ಪಡಸಾವಳಿ, ತೀರ್ಥ, ಮುನ್ನಹಳ್ಳಿ ಗ್ರಾಮದಲ್ಲೂ ಮಳೆ ಜೋರಾಗಿ ಸುರದಿದೆ. ಹಲವಡೆ ಆಲಿಕಲ್ಲು ಮಳೆಗೆ ಮಾವಿನ ಹಣ್ಣು, ಕಲ್ಲಂಗಡಿ ಹಣ್ಣಿನ ಬೆಳೆಗೆ ಹಾನಿಯಾಗಿದೆ. ಕಲಬುರ್ಗಿ ನಗರ ಹಾಗೂ ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಿದೆ.
ಭಾರಿ ಮಳೆ: ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರದ ಹಲವೆಡೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ಮಳೆಗೂ ಮೊದಲು ಬೀಸಿದ ಗಾಳಿಗೆ ಹಲವು ಮನೆಗಳ ತಗಡು, ಹೆಂಚು ಹಾರಿ ಹೋಗಿವೆ.
ದಾವಣಗೆರೆ ನಗರ, ನ್ಯಾಮತಿ, ಹೊನ್ನಾಳಿ, ಸಾಸ್ವೆಹಳ್ಳಿ, ತ್ಯಾವಣಿಗೆ, ಮಲೇಬೆನ್ನೂರು, ಸಂತೇಬೆನ್ನೂರಿನಲ್ಲಿ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ಮಾವಿನಕಟ್ಟೆ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಚಿಕ್ಕಜಾಜೂರು ಸಮೀಪದ ಚಿಕ್ಕನಕಟ್ಟೆ ಗ್ರಾಮದಲ್ಲಿ ಕೊಟ್ಟಿಗೆಯ ಚಾವಣಿಗೆ ಹಾಕಿದ್ದ ತಗಡುಗಳು ಹಾರಿ ಹೋಗಿವೆ.ಗಾಳಿಗೆ ಅಡಿಕೆ ಮರಗಳು ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದು ವಿದ್ಯತ್ ಸಂಪರ್ಕ ಸ್ಥಗಿತಗೊಂಡಿತ್ತು.
ಸಿಡಿಲು ಬಡಿದು ಇಬ್ಬರ ಸಾವು
ಕಲಬುರ್ಗಿ: ಸಿಡಿಲು ಬಡಿದು ಜೇವರ್ಗಿ ತಾಲ್ಲೂಕುಮಯೂರ ಗ್ರಾಮದ ಸಿದ್ದಮ್ಮ ಭೀಮಣ್ಣ ಘತ್ತರಗಿ (35) ಹಾಗೂ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದ ಐತೇಶಾಮ ಇಕ್ಬಾಲ್ ಸಾಬ್ (16)ಗುರುವಾರ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.