ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಸೇವೆಯಲ್ಲಿರುವ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಕರ್ನಾಟಕ ಗೃಹ ಮಂಡಳಿಯ (ಕೆಎಚ್ಬಿ) 10 ವಸತಿ ಗೃಹಗಳನ್ನು ಮಾರಾಟ ಮಾಡಿದ್ದ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘಿಸಿದ ಕೆಎಚ್ಬಿಗೆ ₹1 ಲಕ್ಷ ದಂಡ ವಿಧಿಸಿದೆ.
ಕೆ.ಎ.ಚಂದ್ರಶೇಖರ್ ಮತ್ತು ಇತರ ಮೂವರು ಸ್ಥಳೀಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ವರ್ಗಾವಣೆಗೊಂಡ 10 ನೌಕರರು ಮನೆ ಖಾಲಿ ಮಾಡಬೇಕಾದ ಸಂದರ್ಭದಲ್ಲಿ ಅವರಿಗೇ ಕೆಎಚ್ಬಿ ಮಾರಾಟ ಮಾಡಿದೆ. ಇದು ಮಂಡಳಿಯ ನಿಯಮಗಳ ಉಲ್ಲಂಘನೆ ಮತ್ತು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ’ ಎಂದು ಆರೋಪಿಸಿದ್ದರು.
‘ಈ ರೀತಿಯ ಅಭ್ಯಾಸಕ್ಕೆ ಒಮ್ಮೆ ಅನುಮತಿ ನೀಡಿದರೆ ಸರ್ಕಾರದ ಮನೆ ಮತ್ತು ಆಸ್ತಿಗಳನ್ನು ಹಾಲಿ ಮತ್ತು ನಿವೃತ್ತ ನೌಕರರಿಗೆ ಕೆಎಚ್ಬಿ ಮಾರಾಟ ಮಾಡಿಬಿಡುತ್ತದೆ’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಹೇಳಿತು.
‘ಕಾರ್ಯವಿಧಾನಗಳನ್ನು ಅನುಸರಿಸದೆ ಕೆಎಚ್ಬಿ ತನ್ನ ಆಸ್ತಿಯನ್ನು ಯಾವುದೇ ವ್ಯಕ್ತಿಗೆ ಮಾರಾಟ ಅಥವಾ ಗುತ್ತಿಗೆ ಆಧಾರದಲ್ಲಿ ನೀಡಬಾರದು. ವಸತಿ ಗೃಹ ಖರೀದಿ ಮಾಡಿದ್ದ 10 ಜನರಿಗೆ ಶೇ 12.5ರ ಬಡ್ಡಿ ದರದಲ್ಲಿ ಮೊತ್ತ ಮರು ಪಾವತಿ ಮಾಡಬೇಕು’ ಎಂದು ಆದೇಶಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.