ಕೆಪಿಎಸ್ಸಿ ನೇಮಕ ನಿರ್ಲಕ್ಷ್ಯ: ಸಿಎಂಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪತ್ರ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯ ವೈಖರಿ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
'ಕಳೆದ 10 ವರ್ಷಗಳಲ್ಲಿ ಕೆಪಿಎಸ್ಸಿ ನೇಮಕ ಪರೀಕ್ಷೆಯನ್ನು ಕೇವಲ 4 ಬಾರಿ ನಡೆಸಲಾಗಿದೆ. 2017ನೇ ಸಾಲಿನ ನೇಮಕಾತಿಗೆ ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ನಡೆದ ಮುಖ್ಯ ಪರೀಕ್ಷೆಯ ಫಲಿತಾಂಶವಿನ್ನೂ ಪ್ರಕಟಗೊಂಡಿಲ್ಲ. ಶೀಘ್ರದಲ್ಲೇ ಫಲಿತಾಂಶವನ್ನು ಪ್ರಕಟಿಸಲು ಸೂಚನೆ ನೀಡಬೇಕು' ಎಂದು ಸಿಎಂಗೆ ಬರೆದ ಪತ್ರದಲ್ಲಿ ಸುರೇಶ್ ಕುಮಾರ್ ವಿನಂತಿಸಿದ್ದಾರೆ.
'106 ಹುದ್ದೆಗಳಿಗಾಗಿ 2017ನೇ ಸಾಲಿನ ಅಧಿಸೂಚನೆಯು 2020ನೇ ಸಾಲಿನ ಫೆಬ್ರುವರಿ ತಿಂಗಳಲ್ಲಿ ಪ್ರಕಟವಾಗಿದೆ. ಪರೀಕ್ಷೆ ಬರೆದ 1.67 ಲಕ್ಷ ಅಭ್ಯರ್ಥಿಗಳ ಪೈಕಿ 2,200 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. 2020, ಆಗಸ್ಟ್ 24ರಂದು ಪೂರ್ವಭಾವಿ ಪರೀಕ್ಷೆ ನಡೆದಿದೆ. 2021ನೇ ಫೆಬ್ರುವರಿ 13 ರಿಂದ 16ರ ವರೆಗೆ ಮುಖ್ಯ ಪರೀಕ್ಷೆಗಳು ನಡೆದಿವೆ. ಇದಾಗಿ 15 ತಿಂಗಳಾದರೂ ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದಿಲ್ಲ' ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಹೇಳಿದ್ದಾರೆ.
ಈ ಕುರಿತು ಮಾರ್ಚ್ ತಿಂಗಳಲ್ಲೇ ಸಿಎಂಗೆ ಪತ್ರ ಬರೆದಿದ್ದೆ. ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ವಾಸ್ತವಾಂಶಗಳನ್ನು ವಿವರಿಸಿದ್ದೆ. ಆದರೂ ಈವರೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.