ಬೆಂಗಳೂರು: ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪುಡಿ ರೌಡಿಯ ರೀತಿ ಕೆಪಿಸಿಸಿ ಅಧ್ಯಕ್ಷರು ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು, ‘ಪಾದಯಾತ್ರೆಯನ್ನು ತಡೆಯಲು ರಾಜ್ಯ ಗೃಹ ಸಚಿವರು ಇನ್ನೊಂದು ಜನ್ಮ ಎತ್ತಿ ಬರಬೇಕು. ತಾಕತ್ತಿದ್ದರೆ ತಡೆಯಿರಿ ನೋಡೋಣ ಎಂಬ ಸವಾಲುಗಳನ್ನು ಡಿ.ಕೆ.ಶಿವಕುಮಾರ್ ಹಾಕುತ್ತಿದ್ದಾರೆ. ಪುಡಿ ರೌಡಿಯ ರೀತಿ ಕೆಪಿಸಿಸಿ ಅಧ್ಯಕ್ಷರು ವರ್ತಿಸುತ್ತಿದ್ದಾರೆ. ಡಿಕೆಶಿಯವರೇ, ನೀವು ರೌಡಿ ಕೊತ್ವಾಲನ ಶಿಷ್ಯ ಎಂಬುದನ್ನು ತೋರಿಸಿಕೊಡುತ್ತಿದ್ದೀರಾ?’ ಎಂದು ಪ್ರಶ್ನಿಸಿದೆ.
‘ಜಂಟಿ ಪತ್ರಿಕಾಗೋಷ್ಠಿ ಮೂಲಕ ಸುಳ್ಳು ಪ್ರತಿಪಾದನೆಗೆ ಹೊರಟಿರುವ ಕಾಂಗ್ರೆಸ್ ಪಕ್ಷದ ಒಂಟಿ ಒಂಟಿ ನಾಯಕರೇ, ಹತ್ತಾರು ಪ್ರಶ್ನೆ ಎತ್ತುವ ಮುನ್ನ ನಮ್ಮ ಒಂದು ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಯಾರು?’ ಎಂದು ಬಿಜೆಪಿ ಕೇಳಿದೆ.
‘ಮೇಕೆದಾಟು ಯೋಜನೆಗೆ ತಡೆ ಕೋರಿ ಯಾರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೋ, ಆ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಸೋನಿಯಾ ಗಾಂಧಿ ಕುಮ್ಮಕ್ಕಿನಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇ?’ ಎಂದು ಬಿಜೆಪಿ ಟ್ವೀಟಿಸಿದೆ.
‘ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಹಾಗಾದರೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಬೇಕಿರುವುದು ಯಾರ ವಿರುದ್ಧ? ಡಿಕೆಶಿಯವರೇ, ಮೇಕೆದಾಟು ಈಗ ಸ್ಟಾಲಿನ್ ಸರ್ಕಾರದ ಅಂಗಳದಲ್ಲಿದೆ. ನೀವು ಸುಳ್ಳಿನ ಜಾತ್ರೆ ಮಾಡುವ ಬದಲು, ಅವರೊಂದಿಗೆ ಮಾತುಕತೆ ನಡೆಸಿ’ ಎಂದು ಬಿಜೆಪಿ ಒತ್ತಾಯಿಸಿದೆ.
‘ಮಾನ್ಯ ಡಿಕೆಶಿ ಅವರೇ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವುದು ಬೇಡ. ಪ್ರಧಾನಿ ಮೋದಿಯೋ, ರಾಹುಲ್ ಗಾಂಧಿಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸುವುದೂ ಬೇಡ. ನೀವಿಬ್ಬರೂ ಸೇರಿ ಸ್ಟಾಲಿನ್ ಮನವೊಲಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾದ ದಾವೆ ವಾಪಾಸ್ ತೆಗಿಸಿ. ನಿಮ್ಮ ತಾಕತ್ತನ್ನು ಅಲ್ಲಿ ಪ್ರದರ್ಶಿಸಿ’ ಎಂದು ಬಿಜೆಪಿ ತಿಳಿಸಿದೆ.
ಮಾನ್ಯ ಡಿಕೆಶಿ ಅವರೇ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವುದು ಬೇಡ.
— BJP Karnataka (@BJP4Karnataka) January 7, 2022
ಪ್ರಧಾನಿ ಮೋದಿಯೋ, ರಾಹುಲ್ ಗಾಂಧಿಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸುವುದೂ ಬೇಡ.
ನೀವಿಬ್ಬರೂ ಸೇರಿ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆಯಾದ ದಾವೆ ವಾಪಾಸ್ ತೆಗಿಸಿ.
ನಿಮ್ಮ ತಾಕತ್ತನ್ನು ಅಲ್ಲಿ ಪ್ರದರ್ಶಿಸಿ.#ಸುಳ್ಳಿನಜಾತ್ರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.