ಕಲಬುರ್ಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣದ ಪ್ರಯುಕ್ತ ಡಿಸೆಂಬರ್ 6ರಂದು ನಗರ ಹೊರವಲಯದಲ್ಲಿರುವ ಜಾಫರಬಾದ ಸ್ಮಶಾನ ಭೂಮಿಯಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ –ಒಂದು ಚಿಂತನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ.ಮದನಕರ ತಿಳಿಸಿದರು.
‘ಡಿ.5ರಂದು ಸ್ಮಶಾನದಲ್ಲಿ ಭಜನೆ ನಡೆಸಿ, ಅಲ್ಲೇ ಮಲಗುತ್ತೇವೆ. ಡಿ.6ರಂದು ಸ್ಮಶಾನದ ‘ಎಂ. ಜಯಣ್ಣ ವೇದಿಕೆ’ಯಲ್ಲಿ ಬೆಳಿಗ್ಗೆ 11ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಎರಡು ಜೋಡಿಗಳ ವಿವಾಹ, ಚಿಂತನಾ ಕಾರ್ಯಕ್ರಮ ನಡೆಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿಂತನಾ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ, ನಟ ದುನಿಯಾ ವಿಜಯ್ ಸೇರಿದಂತೆ ಸಾಮಾಜಿಕ ಹೋರಾಟಗಾರರು, ಚಿಂತಕರು, ಸ್ವಾಮೀಜಿಗಳು ಭಾಗವಹಿಸುವರು’ ಎಂದರು.
ದಲಿತ ಸೇನೆ ಸಂಘಟನೆಯ ಮುಖಂಡರಾದ ಗೌಸ್ಬಾಬಾ ಜುನೈದಿ, ಶ್ರೀಕಾಂತ ರೆಡ್ಡಿ, ಗುರು ಮಳಗಿ, ಕಪಿಲ ವಾಲಿ, ವಸಂತ ಆರ್. ಲೇಂಗಟಿ ಇದ್ದರು.