ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ 545 ಹುದ್ದೆಗಳಿಗೆ ಹೊಸದಾಗಿ ಲಿಖಿತ ಪರೀಕ್ಷೆಗೆ ನೀಡಿದ್ದ ತಡೆ ಆದೇಶವನ್ನು ಹೈಕೋರ್ಟ್ ಇದೇ 19ರವರೆಗೆ ವಿಸ್ತರಿಸಿದೆ. ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಅರ್ಜಿಗಳ ವಿಚಾರಣೆ ನಡೆಸಿತು.
ಅರ್ಜಿದಾರ ಅಭ್ಯರ್ಥಿಗಳ ಪರ ಹಿರಿಯ ವಕೀಲರು ಅನಾರೋಗ್ಯದ ಕಾರಣ ಗೈರುಹಾಜರಾಗಿದ್ದ ಹಿನ್ನೆಲೆ ಯಲ್ಲಿ ಪೀಠ ವಿಚಾರಣೆ ಮುಂದೂಡಿತಲ್ಲದೆ, ಆದ್ಯತೆಯ ಮೇರೆಗೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
‘ಮುಂದಿನ ಆದೇಶದವರೆಗೆ ಪಿಎಸ್ಐ ನೇಮಕಾತಿಗಾಗಿ ಮರುಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಬಾರದು’ ಎಂದು 2022ರ ಸೆ. 28ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಇದೇ 19ರವರೆಗೆ ವಿಸ್ತರಿಸಿ ಆದೇಶಿಸಿತು.