ಸಿದ್ದಾಪುರ: ಸಮೀಪದ ಕರಡಿಗೋಡು ಗ್ರಾಮದಲ್ಲಿ, ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.
ಬೆಳಗಿನ ಜಾವ, ಗ್ರಾಮದ ಫಾಯಿಸ್ ಎಂಬುವವರ ಕಾಫಿ ತೋಟದ ಅಂಚಿನಲ್ಲಿ ಇರುವ ಕಂದಕಕ್ಕೆ ಅಂದಾಜು 24 ವರ್ಷದ ಸಲಗವೊಂದು ಬಿದ್ದಿದೆ. ಅದು ಕಂದಕದಿಂದ ಹೊರಬರಲು ಯತ್ನಿಸಿದ್ದು, ಕಾಡಾನೆ ಘೀಳಿಡುವ ಶಬ್ದ ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಲಯ ಅರಣ್ಯ ಅಧಿಕಾರಿ ಕಳ್ಳೀಯ ದೇವಯ್ಯ ನೇತೃತ್ವದ ತಂಡ ಸ್ಥಳಕ್ಕಾಗಮಿಸಿದೆ. ಬಳಿಕ, ಜೆ.ಸಿ.ಬಿ ಯ ಸಹಾಯದಿಂದ ಕಾಡಾನೆಯನ್ನು ರಕ್ಷಿಸಿ, ಅರಣ್ಯಕ್ಕೆ ಅಟ್ಟಲಾಯಿತು.