ಬೆಂಗಳೂರು: ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಬಳಸಿದ್ದ ಹಳೆಯ ಕನ್ನಡ ಲಿಪಿಯನ್ನು ಡಿಜಿಟಲ್ ರೂಪದಲ್ಲಿ ಪ್ರಶಾಂತ್ ಪಂಡಿತ್ ಅವರು ಮರು ಸೃಷ್ಟಿಸಿದ್ದು, ಆ ಲಿಪಿ ವಿನ್ಯಾಸವನ್ನು ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಿಟೆಲ್ ಗಿರಿ ಮೊಮ್ಮಗ ಈವ್ಸ್ ಮಯರ್ ಮಾತನಾಡಿ, ‘ದೇಶ ಪರ್ಯಟನೆ ವೇಳೆ ರಾಜ ಮಹಾರಾಜರ ಕೈಯಲ್ಲಿ ಕತ್ತಿ ರಾರಾಜಿಸುವುದನ್ನು ಕಂಡಿದ್ದೇವೆ. ಆದರೆ, ಕರ್ನಾಟಕದಲ್ಲಿ ಮುತ್ತಾತ ಕಿಟೆಲ್ ಅವರ ಎಲ್ಲ ಪ್ರತಿಮೆಗಳ ಕೈಯಲ್ಲಿ ಪುಸ್ತಕ ನೋಡಿ ಸಂತೋಷವಾಯಿತು’ ಎಂದರು.
‘ಕಿಟೆಲ್ ಅವರು ಜ್ಞಾನದ ಮೂಲಕ ಎಲ್ಲರನ್ನು ಗೆಲ್ಲಲು ಪ್ರಯತ್ನಿಸಿದರು. ಅವರು ಬಳಸಿದ ಒಂದೇ ಆಯುಧ ಲೇಖನಿ. ನನ್ನ ತಾತನ ಕಥೆಗಳಲ್ಲಿ ಭಾರತ ಹಾಗೂ ಕರ್ನಾಟಕ ಎಂಬ ಅದ್ಭುತ ರಾಜ್ಯದ ಕತೆಗಳಲ್ಲಿ ತನ್ನ ತಾತನನ್ನೂ ಒಬ್ಬ ಪಾತ್ರಧಾರಿಯಾಗಿ ಕಂಡಿದ್ದೇವೆ’ ಎಂದು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ, ಭಾರತೀಯ ಭಾಷೆಗಳ ಲಿಪಿ ಕ್ಯಾಲಿಗ್ರಫಿ ಶೈಲಿಯಲ್ಲಿದ್ದು, ಕಿಟಲ್ ಫಾಂಟ್ ಅನ್ನು ಅದೇ ರೀತಿ ಕಾಣುವಂತೆ ಮಾಡಿದ್ದನ್ನು ನೋಡಿ ಸಂತೋಷವಾಯಿತು’ ಎಂದರು.
ಭಾರತೀಯ ಭಾಷೆಗಳಲ್ಲಿ ಮರುಸೃಷ್ಟಿ ಕೆಲಸಗಳು ಕಡಿಮೆಯಾಗಿವೆ. ಈ ರೀತಿಯ ಕೆಲಸಗಳು ಇನ್ನೂ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಪ್ರಶಾಂತ ಪಂಡಿತ್ ಅವರು ಮಾತನಾಡಿ, ‘ಕಿಟೆಲ್ 70 ಸಾವಿರ ಪದಗಳ ನಿಘಂಟು ಸಿದ್ಧಪಡಿಸಿದ್ದರು. ಅವರು ಬರೆದ ಅನೇಕ ಪುಸ್ತಕಗಳ ಅರಿವು ವಿದ್ವತ್ ವಲಯದ ಎಲ್ಲರಿಗೂ ಪರಿಚಯ’ ಎಂದರು.
‘ಫಾಂಟ್ ಇನ್ನೂ ಬಹಳಷ್ಟು ಪರೀಕ್ಷೆಗೆ ಒಳಪಡಬೇಕಿದ್ದು, ಹಲವಾರು ಸುಧಾರಣೆ ಕಾಣಬೇಕಿದೆ. ಕನ್ನಡ ಸಮುದಾಯ ಈ ಕೆಲಸಕ್ಕೆ ಮುಂದಾಗಬಹುದು. ಇದೇ ಕಾರಣ ದಿಂದ ಫಾಂಟ್ ಅನ್ನು ಮುಕ್ತ ಹಾಗೂ ಸ್ವತಂತ್ರ್ಯ ತಂತ್ರಾಂಶವಾಗಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.