ಬಳ್ಳಾರಿ: ಕಾಂಗ್ರೆಸ್ನ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ಶ್ರೀರಾಮುಲು ಅವರ ಆಲಿಂಗನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶ್ರೀರಾಮುಲು ಮತ್ತು ಸಂತೋಷ್ ಲಾಡ್ ರಾಜಕೀಯವಾಗಿ ಬದ್ಧ ವೈರಿ ಗಳಾದರೂ ಬಹಳ ದಿನಗಳ ನಂತರ ಭೇಟಿಯಾದ ಹಿನ್ನೆಲೆಯಲ್ಲಿ ಪರಸ್ಪರ ಆಲಂಗಿಸಿಕೊಂಡು ನೆರೆದವರಿಗೆ ಅಚ್ಚರಿ ಮೂಡಿಸಿದರು. ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಉಡುಸಲಮ್ಮ ಜಾತ್ರಾ ಮಹೋತ್ಸವಕ್ಕೆ ಬುಧವಾರ ಬಂದಿದ್ದ ಉಭಯ ನಾಯಕರು ತಮ್ಮ ನಡುವಿನ ಆತ್ಮೀಯತೆಯನ್ನು ಪ್ರದರ್ಶಿಸಿದರು.
ಸಂಡೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಚಿವ ಶ್ರೀರಾಮುಲು, ಕ್ಷೇತ್ರದಲ್ಲಿ ಸತತವಾಗಿ ಓಡಾಡುತ್ತಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಸಂತೋಷ್ ಲಾಡ್ ಪ್ರಯತ್ನ ನಡೆಸಿದ್ದಾರೆ. ಇಬ್ಬರು ಸಾರ್ವಜನಿಕವಾಗಿ ಆತ್ಮೀಯತೆ ಪ್ರದರ್ಶಿಸಿರುವುದು ರಾಜಕೀಯ ಚರ್ಚೆಗೂ ಕಾರಣವಾಗಿದೆ.
ರಾಜಕೀಯಕ್ಕೂ ಸಂಬಂಧವಿಲ್ಲ-ಲಾಡ್: ‘ಜಾತ್ರೆಯಲ್ಲಿ ಸಚಿವ ಶ್ರೀರಾಮುಲು ಅವರನ್ನು ಆಲಿಂಗಿಸಿದ್ದಕ್ಕೂ ರಾಜಕೀ ಯಕ್ಕೂ ಸಂಬಂಧವಿಲ್ಲ. 98ರಿಂದ ನಾವಿಬ್ಬರೂ ಸ್ನೇಹಿತರು ರಾಜಕೀಯದ ಹೊರತಾಗಿ ವೈಯಕ್ತಿಕ ಪ್ರೀತಿ, ಸಂಬಂಧ ಉಳಿಸಿಕೊಂಡಿದ್ದೇವೆ’ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.
‘ಶ್ರೀರಾಮುಲು ಸಂಡೂರಿಗೆ ಬಂದು ಸ್ಪರ್ಧೆ ಮಾಡುವುದಾಗಿ ಹೇಳಿರುವುದಕ್ಕೂ ನಮ್ಮ ಭೇಟಿಗೂ ಯಾವುದೇ ಸಂಬಂಧವಿಲ್ಲ. ನಾನು ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದಾಗ ಅನೇಕ ಸಲ ಭೇಟಿಯಾಗಿದ್ದೇವೆ. ಆಗ ವಿಡಿಯೋ ಕ್ಯಾಮರಾಗಳಿಗೆ ಸಿಕ್ಕಿರಲಿಲ್ಲ. ಈ ಸಲ ಸಿಕ್ಕಿದ್ದೇವೆ’’ ಎಂದು ಲಾಡ್ ತಿಳಿಸಿದರು.