ಬೆಂಗಳೂರು: ಇಸ್ರೊ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ 12 ಸದಸ್ಯರ ಪಠ್ಯಕ್ರಮ ರಚನಾ ಸಮಿತಿಯನ್ನು ರಚಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ. ಇವರಲ್ಲದೆ, ಸಮಿತಿಯಲ್ಲಿ ಮತ್ತಿಬ್ಬರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಟಿ.ವಿ. ಕಟ್ಟೀಮನಿ ಹಾಗೂ ಎಂ.ಕೆ. ಶ್ರೀಧರ್ ಅವರು ಈ ತಂಡದಲ್ಲಿದ್ದಾರೆ.
ಸಮಿತಿಯು ನಾಲ್ಕು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳನ್ನು (ಎನ್ಸಿಎಫ್) ಅಭಿವೃದ್ಧಿಪಡಿಸುವ ಕೆಲಸ ನಿರ್ವಹಿಸಲಿದೆ. ಈ ಮುನ್ನ ಕಸ್ತೂರಿ ರಂಗನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕರಡು ಸಮಿತಿಯ ನೇತೃತ್ವ ವಹಿಸಿದ್ದರು.
ಮಹೇಶ್ ಚಂದ್ರ ಪಂತ್, ಗೋವಿಂದ ಪ್ರಸಾದ್ ಶರ್ಮಾ, ನಜ್ಮಾ ಅಖ್ತರ್, ಮಿಲಿಂದ್ ಕಾಂಬ್ಳೆ, ಮೈಕೆಲ್ ಡಾನಿನೊ, ಜಗಬೀರ್ ಸಿಂಗ್, ಮಂಜುಳ್ ಭಾರ್ಗವ, ಧೀರ್ ಜಿಂಗ್ರಾನ್, ಶಂಕರ್ ಮರುವಾಡ ಅವರು ಸಮಿತಿಯ ಇತರ ಸದಸ್ಯರು.
ಶಾಲಾ ಶಿಕ್ಷಣ, ಎಳೆ ಮಕ್ಕಳ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ – ಈ ನಾಲ್ಕು ವಿಭಾಗಗಳಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳ ಅನ್ವಯ ಪಠ್ಯಕ್ರಮದಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲು ಸಮಿತಿಗೆ ಸೂಚಿಸಲಾಗಿದೆ.