ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಭಾನುವಾರ ಬೆಳಿಗ್ಗೆ ಕೋಲಾರಕ್ಕೆ ಪ್ರಯಾಣ ಬೆಳೆಸಿದರು.
ರಾಜ್ಯದಾದ್ಯಂತ ಚುನಾವಣಾ ಪ್ರಚಾರಕ್ಕೆ ಕೈಗೊಳ್ಳಲು ವಿಶೇಷವಾಗಿ ಸಿದ್ದಪಡಿಸಿರುವ ಬಸ್ನಲ್ಲಿ ಅವರು ಪ್ರಯಾಣ ಬೆಳೆಸಿದರು. ಕೋಲಾರ ಜಿಲ್ಲೆಯ ಪಕ್ಷದ ಮುಖಂಡರೂ ಅವರ ಜೊತೆಗೆ ಇದ್ದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಎಲ್ಲರು ಒಟ್ಟಾಗಿ ಹೋಗಬೇಕು. ಆ ಕಾರಣಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದೇವೆ. ಕೋಲಾರದವರು ನನ್ನನ್ನು ಕರೆಯುತ್ತಿದ್ದಾರೆ. ಅಲ್ಲಿ ಶ್ರೀನಿವಾಸ್ ಗೌಡ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ, ನೀವು ಸ್ಪರ್ಧಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗುತ್ತಿದ್ದೇನೆ’ ಎಂದರು.
‘ಹಲವು ಕ್ಷೇತ್ರಗಳಿಂದಲೂ ಆಹ್ವಾನ ಬಂದಿದೆ. ಬಾದಾಮಿ, ವರುಣಾ, ಚಾಮರಾಜಪೇಟೆ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಒತ್ತಡ ಇದೆ. ಆದರೆ, ಕೋಲಾರದಲ್ಲಿ ಹೆಚ್ಚಿನ ಒತ್ತಡ ಇದೆ. ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿದ ಬಳಿಕ ಸೂಕ್ತ ತೀರ್ಮಾನ ಮಾಡುತ್ತೇನೆ‘ ಎಂದರು.
ಸಿದ್ದರಾಮಯ್ಯ ಅವರ ಜೊತೆ ಡಾ.ಎಂ.ಸಿ. ಸುಧಾಕರ್, ನಸೀರ್ ಅಹಮ್ಮದ್, ಬೈರತಿ ಸುರೇಶ್, ಎಂ.ಆರ್. ಸೀತಾರಾಮ್ ಕೂಡಾ ಇದ್ದರು.