ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರಿಯಾ ಕೊರತೆ ನೀಗಿಸಿ, ರೈತರ ಸಂಕಷ್ಟ ನಿವಾರಿಸಿ: ಸಿಎಂಗೆ ಸಿದ್ದರಾಮಯ್ಯ ಪತ್ರ

Last Updated 8 ಸೆಪ್ಟೆಂಬರ್ 2020, 11:26 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂಗಾರು ಬಿತ್ತನೆಗೆ ಮುಂದಾಗಿರುವ ರೈತರು ಯೂರಿಯಾ ರಸಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಯೂರಿಯಾ ತರಿಸಿಕೊಂಡು, ರೈತರ ಸಂಕಷ್ಟ ಪರಿಹರಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಕೆಲವು ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರದ ಸಮಸ್ಯೆ ಉದ್ಭವಿಸಿದೆ. ಬೆಳೆಗೆ ಯೂರಿಯಾ ಬೇಕಾಗಿದೆ. ಯೂರಿಯಾ ಲಭ್ಯವಿಲ್ಲವೆಂದು ಅಂಗಡಿಯವರು ಹೇಳುತ್ತಿದ್ದಾರೆಂದು ರೈತರು ನನ್ನ ಗಮನಕ್ಕೆ ತಂದಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಮುಂಗಾರು ಅವಧಿಗೆ ಸಾಮಾನ್ಯವಾಗಿ 8.50 ಲಕ್ಷ ಟನ್‍ ಯೂರಿಯಾ ಅವಶ್ಯಕತೆ ಇತ್ತು. ಆದರೆ, ವೈಬ್‍ಸೈಟ್‍ನಲ್ಲಿರುವ ಮಾಹಿತಿ ಪ್ರಕಾರ ಏ. 1ರಿಂದ ಸೆ.6ರವರೆಗೆ 8,95,221 ಟನ್‍ ಯೂರಿಯಾ ವಿತರಿಸಲಾಗಿದೆ. ಇನ್ನೂ 1,88,996 ಟನ್‍ ಲಭ್ಯವಿದೆ ಎಂದು ಹೇಳಲಾಗುತ್ತಿದ. ಆದರೆ, ಜನರು ಮಾತ್ರ ಯೂರಿಯಾ ಸಿಗುತ್ತಿಲ್ಲವೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾದರೆ ಸಮಸ್ಯೆಯ ಮೂಲವಿರುವುದು ಎಲ್ಲಿ. ಕಾಳಸಂತೆಕೋರರು ಅಕ್ರಮವಾಗಿ ದಾಸ್ತಾನು ಮಾಡಿರಬೇಕು, ನಿಮ್ಮ ವೆಬ್‍ಸೈಟ್‍ನ ಅಂಕಿಅಂಶಗಳು ತಪ್ಪು ಇರಬೇಕು ಅಥವಾ ಜನರ ಬೇಡಿಕೆ ಹೆಚ್ಚಾಗಿರಬೇಕು’ ಎಂದೂ ಪತ್ರದಲ್ಲಿ ಬರೆದಿದ್ದಾರೆ.

‘ಈ ಮೂರೂ ಅಂಶಗಳೂ ನಿಜ ಇರುವಂತೆ ಕಾಣುತ್ತಿವೆ. ಕೊರೊನಾ ಕಾರಣದಿಂದ ಲಾಕ್‍ಡೌನ್ ಹೇರಿದ್ದರಿಂದ ನಗರಗಳಿಂದ ಜನರು ವ್ಯಾಪಕವಾಗಿ ಗ್ರಾಮಾಂತರ ಪ್ರದೇಶಕ್ಕೆ ವಲಸೆ ಹೋದರು. ಹೀಗಾಗಿ, ಸಹಜವಾಗಿಯೇ ಕೃಷಿ ಕ್ಷೇತ್ರದ ಮೇಲೆ ಒತ್ತು ಬೀಳಲಾರಂಭಿಸಿತು. ಈ ವಿಚಾರವನ್ನು ಮನಗಂಡು ನಾವು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸರ್ಕಾರಕ್ಕೆ ಮಾಡಿದ ಮನವಿ ಪತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡಿಕೊಂಡು, ಪೂರೈಸುವಂತೆ ಆಗ್ರಹಿಸಿದ್ದೆವು’‌

‘ಸರ್ಕಾರದ ಅಂಕಿಅಂಶಗಳ ಪ್ರಕಾರ ಶೇ 20ರಷ್ಟು ಹೆಚ್ಚುವರಿ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸರ್ಕಾರ ನಿರ್ಲಕ್ಷ್ಯ ತೋರಿದರೆ ರೈತರು ಪರದಾಡಬೇಕಾಗುತ್ತದೆ’

‘ಬಿಜೆಪಿ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಗೊಬ್ಬರ ಸಮರ್ಪಕವಾಗಿ ವಿತರಿಸಲಾಗದೆ ಸಂಘರ್ಷ ಉಂಟಾಗಿತ್ತು. ಹಾವೇರಿಯಲ್ಲಿ ಗೋಲಿಬಾರ್ ನಡೆದು ಇಬ್ಬರು ರೈತರು ಬಲಿಯಾಗಿದ್ದರು. ಅಂಥ ಕೆಟ್ಟ ನೆನಪುಗಳು ಬೆನ್ನಿಗಿದ್ದರೂ ಗೊಬ್ಬರದಂಥ ಮಹತ್ವವಾದ ವಿಷಯವನ್ನು ನಿಭಾಯಿಸಲಾಗದೆ ಸರ್ಕಾರ ಮತ್ತೊಮ್ಮೆ ಸಂಪೂರ್ಣ ವಿಫಲವಾಗಿದೆ’ ಎಂದೂ ಸಿದ್ದರಾಮಯ್ಯ ಪತ್ರದಲ್ಲಿ ದೂರಿದ್ದಾರೆ

‘ರೈತರ ಕಾಳಜಿಯಿಂದಾಗಿ ಬೆಳೆಗಳು ಚೆನ್ನಾಗಿರುವುದರಿಂದ ಬೆಲೆ ಕುಸಿತದ ಸಮಸ್ಯೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಉದ್ಭವಿಸುತ್ತದೆ. ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ’ ಎಂದೂ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT