ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಅಬಕಾರಿ ಸಚಿವ ಎಚ್.ನಾಗೇಶ್ ಅವರು ಸೋಮವಾರದಿಂದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಯತ್ನ ಮಂಗಳವಾರ ಬೆಳಿಗ್ಗೆ ಫಲಿಸಿತು. ಆದರೆ, ಮಂತ್ರಿ ಮಂಡಲದಲ್ಲಿ ಉಳಿಯುತ್ತಾರೋ ಇಲ್ಲವೊ ಎಂಬ ಬಗ್ಗೆ ಅವರಿಗೆ ಭರವಸೆ ಸಿಕ್ಕಿಲ್ಲ. ಹೀಗಾಗಿ ಭೇಟಿಯ ಬಳಿಕ ಅನ್ಯಮನಸ್ಕರಾಗಿ ಕಂಡು ಬಂದರು. ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರವೂ ಇರುವುದರಿಂದ ಯಾವುದೇ ಕಾರಣಕ್ಕೂ ತಮ್ಮನ್ನು ಕೈಬಿಡಬಾರದು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು ಎಂದು ತಿಳಿದು ಬಂದಿದೆ.