ಸಿಎಂ ಬೆನ್ನುಬಿದ್ದ ಸಚಿವಾಕಾಂಕ್ಷಿಗಳು: ನಿರಾಸೆಯಿಂದ ಹೋದ ಸಚಿವ ನಾಗೇಶ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಖಚಿತವಾದ ಬೆನ್ನಲ್ಲೇ ಸಚಿವಾಕಾಂಕ್ಷಿ ಶಾಸಕರು ಮತ್ತು ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಇರುವ ಸಚಿವರು ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿ, ಅವರ ಮೇಲೆ ಪ್ರಭಾವ ಬೀರುವ ಕಸರತ್ತು ನಡೆಸಿದರು.
ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಅಬಕಾರಿ ಸಚಿವ ಎಚ್.ನಾಗೇಶ್ ಅವರು ಸೋಮವಾರದಿಂದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಯತ್ನ ಮಂಗಳವಾರ ಬೆಳಿಗ್ಗೆ ಫಲಿಸಿತು. ಆದರೆ, ಮಂತ್ರಿ ಮಂಡಲದಲ್ಲಿ ಉಳಿಯುತ್ತಾರೋ ಇಲ್ಲವೊ ಎಂಬ ಬಗ್ಗೆ ಅವರಿಗೆ ಭರವಸೆ ಸಿಕ್ಕಿಲ್ಲ. ಹೀಗಾಗಿ ಭೇಟಿಯ ಬಳಿಕ ಅನ್ಯಮನಸ್ಕರಾಗಿ ಕಂಡು ಬಂದರು. ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರವೂ ಇರುವುದರಿಂದ ಯಾವುದೇ ಕಾರಣಕ್ಕೂ ತಮ್ಮನ್ನು ಕೈಬಿಡಬಾರದು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಯ ಭೇಟಿಯ ಬಳಿಕ ಅವರು ಸುದ್ದಿಗಾರರು ಜತೆ ಮಾತನಾಡಲು ಯತ್ನಿಸಿದಾಗ ನಿರಾಕರಿಸಿದರು. ನಿರಾಸೆಗೊಂಡಂತೆ ಕಂಡು ಬಂದಿತು.
ಹಿರಿಯ ಶಾಸಕ ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ ಕೂಡ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ಇಬ್ಬರ ಹೆಸರುಗಳು ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿ ಇರುವುದರಿಂದ ಭೇಟಿಗೆ ಮಹತ್ವ ಬಂದಿದೆ. ಈ ಮಧ್ಯೆ ಸಂಪುಟದಿಂದ ಕೈಬಿಡುವವರ ಸಂಖ್ಯೆ ಮೂರಕ್ಕೇರಿದೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಹಬ್ಬಿದೆ.
ಎನ್.ಮಹೇಶ್ ಚಾಲ್ತಿಗೆ: ಎಚ್.ನಾಗೇಶ್ ಅವರನ್ನು ಕೈಬಿಟ್ಟು ಅದರಿಂದ ತೆರವಾಗುವದ ಸಚಿವ ಸ್ಥಾನಕ್ಕೆ ಬಿಎಸ್ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ತರಲಾಗುವುದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚಿನ ದಿನಗಳಲ್ಲಿ ಮಹೇಶ್ ಅವರು ಬಹಿರಂಗವಾಗಿ ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಬೆಂಬಲಿಸುವುದಾಗಿ ಮಹೇಶ್ ಹೇಳಿದ್ದಾರೆ.
ಮಹೇಶ್ ಅವರು ಬಿಜೆಪಿಗೆ ಸೇರುವ ಬಗ್ಗೆ ಒಲವು ತೋರಿಸಿರುವುದು ನಿಜ. ಈ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಚಿವ ಸ್ಥಾನ ಕೊಟ್ಟು ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಬಿಜೆಪಿಯ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.