ಬೆಂಗಳೂರು: ಸಭಾಪತಿಯವರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕುರಿತು ತಕ್ಷಣ ಚರ್ಚೆ ಆರಂಭಿಸಬೇಕು ಎಂಬ ಬಿಜೆಪಿ ಸದಸ್ಯರ ಬೇಡಿಕೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಬುಧವಾರ ಬೆಳಿಗ್ಗೆಯಿಂದ ನಡೆಸುತ್ತಿದ್ದ ಧರಣಿಯನ್ನು ಅಂತ್ಯಗೊಳಿಸಿದರು.
ಮಧ್ಯಾಹ್ನ 3.55ಕ್ಕೆ ಮತ್ತೆ ಕಲಾಪ ಆರಂಭವಾಯಿತು. ಅದಕ್ಕೂ ಮೊದಲೇ ನಡೆದ ಕಲಾಪ ಸಲಹಾ ಸಮಿತಿಯಲ್ಲಿ ನಿರ್ಧಾರವಾದಂತೆ ಬಿಜೆಪಿ ಸದಸ್ಯರು ತಮ್ಮ ಬೇಡಿಕೆಯಿಂದ ಹಿಂದೆ ಸರಿದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾದರು.
ಧರಣಿ ಕೈಬಿಟ್ಟು ಸ್ವಸ್ಥಾನಕ್ಕೆ ತೆರಳುವಂತೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟು ತಮ್ಮ ಸ್ಥಾನಗಳಿಗೆ ವಾಪಸಾದರು. ಬಳಿಕ ಸಹಕಾರ ಸಚಿವರು ಎಪಿಎಂಸಿ ತಿದ್ದುಪಡಿ ಮಸೂದೆ ಮಂಡಿಸಿದರು.