ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕ್ರೈಸ್) ಶಿಕ್ಷಕರಿಗೆ ಏಳು ತಿಂಗಳಿನಿಂದ ವೇತನ ಪಾವತಿಸದೇ ಇರುವ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ವಿಚಾರಣೆ ಆರಂಭಿಸಿದ್ದಾರೆ.
‘ಏಳು ತಿಂಗಳಿನಿಂದ ವೇತನ ಇಲ್ಲ’ ಎಂಬ ವಿಶೇಷ ವರದಿ ‘ಪ್ರಜಾವಾಣಿ’ಯ ಬುಧವಾರದ (ಅಕ್ಟೋಬರ್ 28) ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಪತ್ರಿಕೆಯ ವರದಿಯನ್ನೇ ಆಧಾರವಾಗಿಟ್ಟುಕೊಂಡು ಲೋಕಾಯುಕ್ತರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಯುಕ್ತರು ಮತ್ತು ಕ್ರೈಸ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿರುವ ಲೋಕಾಯುಕ್ತರು, ಶಿಕ್ಷಕರ ವೇತನ ಪಾವತಿ ಕುರಿತು ಪರಿಶೀಲನೆ ನಡೆಸಿ ಮೂರು ವಾರಗ ಳೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
‘ನೌಕರನಿಗೆ ಪುಕ್ಕಟೆಯಾಗಿ ವೇತನ ನೀಡುವುದಿಲ್ಲ. ಆತನ ದುಡಿಮೆಗೆ ಪ್ರತಿಯಾಗಿ ವೇತನ ನೀಡಲಾಗುತ್ತದೆ. ಯಾವುದೇ ವಿಳಂಬವಿಲ್ಲದೆ ನೌಕರರಿಗೆ ವೇತನ ಪಾವತಿಸಬೇಕಾದುದು ಸರ್ಕಾರವೂ ಸೇರಿದಂತೆ ಎಲ್ಲ ಉದ್ಯೋಗದಾತರ ಕರ್ತವ್ಯ’ ಎಂದು ಲೋಕಾಯುಕ್ತರು ಹೇಳಿದ್ದಾರೆ.