ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮುಕ್ತ ಮನಸ್ಸಿನ ರಾಹುಲ್ ಜೊತೆ ಹೆಜ್ಜೆ '...

136 ದಿನಗಳ ‘ಭಾರತ್ ಜೋಡೊ’ ಪಾದಯಾತ್ರೆ: ಹುಬ್ಬಳ್ಳಿಯ ಕಿರಣ್ ಮೂಗಬಸವ ಭಾಗಿ
Last Updated 4 ಫೆಬ್ರುವರಿ 2023, 7:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿವಿಧತೆಯಲ್ಲಿ ಏಕತೆ ಅಂದರೆ ಏನು? ಅನ್ನುವುದನ್ನು ನಾವು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಕಣ್ಣಾರೆ ಕಂಡೆವು, ರಾಹುಲ್‌ ಜೊತೆಗೆ ನಿರಂತರವಾಗಿ ಹೆಜ್ಜೆ ಹಾಕಿದ್ದು ಬದುಕಿನಲ್ಲಿ ಮರೆಯಲಾಗದ ಅನುಭವ...’

‘ರಾಹುಲ್‌ ಅವರದ್ದು ಮಾತು ಕಡಿಮೆ;ಮುಕ್ತ ಮನಸ್ಸು. ದೂರದೃಷ್ಟಿಯುಳ್ಳ ನಾಯಕ. ಜನರ ಸಂಕಷ್ಟ ಅರಿಯಲು ಪಾದಯಾತ್ರೆಯೇ ಸೂಕ್ತವೆಂದು ನಂಬಿದ್ದರು, ಅದರಂತೆ ನಡೆದ ಸರಳ ವ್ಯಕ್ತಿ...’

–ರಾಹುಲ್‌ ಗಾಂಧಿ ಅವರೊಂದಿಗೆ ‘ಭಾರತ್ ಜೋಡೊ’ ಯಾತ್ರೆಯಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ಪಂಥ್‌ಚೌಕ್‌ನಲ್ಲಿ ತ್ರಿವರ್ಣಧ್ವಜ ಹಾರಿಸುವವರೆಗೆ ಒಟ್ಟು 136 ದಿನಗಳ ಕಾಲ, 14 ರಾಜ್ಯ,75 ಜಿಲ್ಲೆಗಳಲ್ಲಿ ಸಾಗಿ, 3,570 ಕಿಮೀ ಹೆಜ್ಜೆ ಹಾಕಿರುವ ಹುಬ್ಬಳ್ಳಿಯ ಕಿರಣ್ ಮೂಗಬಸವ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಮನದಾಳದ ಮಾತುಗಳಿವು.

ಈ ಯಾತ್ರೆಯು ಎರಡು ಸಿದ್ಧಾಂತಗಳ ನಡುವಿನ ಹೋರಾಟವೂ ಆಗಿತ್ತು. ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ, ವರ್ಗ ಮತ್ತು ಜಾತಿ ಆಧಾರದ ಮೇಲೆ ವಿಭಜನೆ, ದ್ವೇಷದ ರಾಜಕೀಯ... ಇವೆಲ್ಲವನ್ನು ಈ ಪಯಣದಲ್ಲಿ ಕಂಡೆವು ಎನ್ನುತ್ತಾರೆ.

ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಿರಣ್ ಅವರು ರಾಹುಲ್ ಗಾಂಧಿ ಅವರ ‘ಜೋಡೊ–ಯಾತ್ರೆ’ 120 ಮಂದಿಯ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದವರಲ್ಲಿ ಒಬ್ಬರು. ಅವರ ಅನುಭವಗಳನ್ನು ಅವರದೇ ಮಾತುಗಳಲ್ಲಿ ಕೇಳೋಣ.

ಯಾತ್ರೆ ಹೇಗಿತ್ತು?

‘ಕನ್ಯಾಕುಮಾರಿಯಲ್ಲಿ ಸೆ.7ರಂದು ಗಾಂಧಿಮಂಟಪದ ಬಳಿಯಿಂದ ಯಾತ್ರೆ ಆರಂಭ. ಪ್ರತಿದಿನ ಬೆಳಿಗ್ಗೆ 4.30ರಿಂದ 5 ಗಂಟೆಯೊಳಗೆ ಎದ್ದು ಸ್ನಾನಾದಿ ಮುಗಿಸಿ, ತಿಂಡಿ ತಿಂದು 6 ಗಂಟೆಗೆ ನಡೆಯಲು ಶುರು ಮಾಡಿ 10 ಗಂಟೆಯವರೆಗೆ ನಡೆಯುತ್ತಿದ್ದೆವು. ನಿಗದಿತ ಸ್ಥಳ ತಲುಪಿ ಮಧ್ಯಾಹ್ನ 1 ಗಂಟೆಗೆ ಊಟ, 2.30ರವರೆಗೆ ವಿಶ್ರಾಂತಿ, ನಂತರ ಸಂಜೆ 5.30–6 ಗಂಟೆಯವರೆಗೆ ನಡಿಗೆ. ರಾತ್ರಿ ನಮ್ಮ ಕಂಟೈನರ್‌ನಲ್ಲಿ ವಸತಿ. ಪ್ರತಿದಿನವೂ ಆಯಾ ಸ್ಥಳಗಳಲ್ಲಿ ನಾನಾ ಸ್ತರದ ಜನರೊಂದಿಗೆ ಮಾತುಕತೆ, ಅವರ ಕಷ್ಟ ಸುಖ ಆಲಿಸುತ್ತಿದ್ದೆವು, ಚರ್ಚಿಸುತ್ತಿದ್ದೆವು.

ಪ್ರತಿಯೊಂದು ರಾಜ್ಯದಲ್ಲಿ ಹೆಜ್ಜೆ ಹಾಕುವಾಗಲೂ ಹೊಸ ಅನುಭವ ನಮಗೆ ಎದುರಾಗುತ್ತಿತ್ತು. ಕನ್ಯಾಕುಮಾರಿಯಲ್ಲಿ ಸೆಕೆ, ಮಳೆ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ಕಡೆ ನದಿ ದಂಡೆ ಮೇಲೆ ಪಯಣ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶಗಳಲ್ಲಿ ಚಳಿ, ಶ್ರೀನಗರ ತಲುಪುವಾಗ ಹಿಮಪಾತ...ಹೀಗೆ ಎಲ್ಲ ವಾತಾವರಣಗಳಲ್ಲಿ ಹೆಜ್ಜೆ ಹಾಕಿದೆವು.

ಜೋಡೋ ಯಾತ್ರೆಯಲ್ಲಿದ್ದ ಒಟ್ಟು 120 ಜನರ ತಂಡದಲ್ಲಿ ಪ್ರತಿದಿನವೂ 4–5 ಜನರಿಗೆ ರಾಹುಲ್‌ ಅವರೊಂದಿಗೆ ಮಾತನಾಡುವ ಅವಕಾಶ ಕಲ್ಪಿಸಲಾಗಿತ್ತು. ನಡೆಯುತ್ತಲೇ ಅವರು ನಮ್ಮೊಂದಿಗೆ ಚರ್ಚಿಸುತ್ತಿದ್ದರು. ನನಗೂ ಅಂಥ ಅವಕಾಶ ದೊರೆಯಿತು, ಮಾರ್ಗದರ್ಶನವೂ ಲಭ್ಯವಾಯಿತು.

ಕುತೂಹಲಿ ರಾಹುಲ್...

ರಾಹುಲ್ ಅವರು ನಡಿಗೆಯುದ್ದಕ್ಕೂ ಮಾತು ಕಡಿಮೆ, ಜನರ ಕಷ್ಟ ಅರಿತುಕೊಳ್ಳುವತ್ತಲೇ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲಿ ಅವರು. ಅವರನ್ನು ನೋಡಲು, ಮಾತಾಡಿಸಲು ಆಯಾ ಊರುಗಳಲ್ಲಿ ಜನ ಸೇರುತ್ತಿದ್ದರು. ಜನರ ನೋವನ್ನು ಹತ್ತಿರದಿಂದ ಅರಿಯಲು ಬಯಸುತ್ತಿದ್ದರು. ಅದೇ ಕಾರಣಕ್ಕೆ ಅವರು ನಡಿಗೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಶ್ರಮಿಕರು, ದುರ್ಬಲರು, ಕಾರ್ಮಿಕರನ್ನು ಕರೆದು ಮಾತನಾಡಿಸಿ ಅವರ ಸಮಸ್ಯೆ ಆಲಿಸುವ ಮುಕ್ತ ಮನಸ್ಸು ಅವರಲ್ಲಿದೆ.

ರಾಹುಲ್ ಫಿಟ್‌ನೆಸ್...

‘ರಾಹುಲ್‌ ದೈಹಿಕವಾಗಿ ಬಹಳ ಗಟ್ಟಿಮುಟ್ಟಾಗಿದ್ದಾರೆ. ಟೀ–ಶರ್ಟ್ ಧರಿಸಿ ಅಂತಹ ಚಳಿಯಲ್ಲೂ ನಡೆದರು. ರಸ್ತೆ ಬದಿ ಚಹಾ ಅಂಗಡಿಗಳಲ್ಲಿ ಚಹಾ ಸವಿದರು. ಡಬ್ಬಾ ಅಂಗಡಿಗಳಲ್ಲಿ ಆಹಾರ ಸವಿದರು. ಮೊದಲಿನಿಂದಲೂ ಅವರಿಗೆ ಫಿಟ್‌ನೆಸ್‌ ಕಾಳಜಿ ಇದೆ. ವಾರಕ್ಕೆ 5 ದಿನ 10 ಕಿಮೀ ರನ್ನಿಂಗ್ ಮಾಡಿ ಗೊತ್ತು. ಮಾರ್ಷಲ್ ಆರ್ಟ್ ಜೊತೆಗೆ ಉತ್ತಮ ಈಜುಪಟು. ಹೀಗಾಗಿ ನಡಿಗೆ ಅವರಿಗೆ ಕಷ್ಟವಾಗಲಿಲ್ಲ. ಪಾದಯಾತ್ರೆಯುದ್ದಕ್ಕೂ ಅವರು ಒಂದು ದಿನವೂ ಮಧ್ಯಾಹ್ನ ವಿಶ್ರಾಂತಿ ಬಯಸಲಿಲ್ಲ, ಬದಲಿಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತಿದ್ದರು’ ಎಂದು ಕಿರಣ್ ನೆನಪಿಸಿಕೊಂಡರು.

‘ಇದಕ್ಕೂ ಮುನ್ನ 600 ಕಿಮೀ ಪಾದಯಾತ್ರೆ ಮಾಡಿದ ಅನುಭವ ಇತ್ತು. ಆದರೆ ಇದು ಬೇರೆ. ನಮ್ಮ ಜನ, ನಮ್ಮ ಭೂಮಿ ಮತ್ತು ನನ್ನನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಯಾತ್ರೆ ಮತ್ತಷ್ಟು ನೆರವಾಯಿತು’ ಎನ್ನುತ್ತಾರೆ ಕಿರಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT