ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ ನೋಡಿ ನಲಿಯುವ ನೌಕಾಲಯ

Last Updated 13 ಮೇ 2013, 19:59 IST
ಅಕ್ಷರ ಗಾತ್ರ

ರಮಣೀಯ ಸಮುದ್ರ ತೀರಗಳು, ಅನನ್ಯ ದ್ವೀಪಸಮೂಹ, ಅದ್ಭುತ ಪ್ರಾಕೃತಿಕ ಸೌಂದರ್ಯಗಳಿಂದ ಕಣ್ಮನ ಸೆಳೆಯುವ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೊಂದು ಗರಿ ಅಪರೂಪದ ಯುದ್ಧ ನೌಕಾ ಸಂಗ್ರಹಾಲಯ. ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿದೆ ಈ ಸಂಗ್ರಹಾಲಯ. ದೇಶದ ಪಶ್ಚಿಮ ಕಡಲ ಕಿನಾರೆಯ ಪ್ರಮುಖ ನೌಕಾನೆಲೆಗಳಲ್ಲೊಂದಾದ ಸೀಬರ್ಡ್ (ಐಎನ್‌ಎಸ್ ಕದಂಬ) ಯೋಜನೆಯೂ ಈ ನಗರದ ಸಮೀಪದಲ್ಲಿಯೇ ಇರುವುದು ಯುದ್ಧ ನೌಕಾ ಸಂಗ್ರಹಾಲಯ ಸ್ಥಾಪನೆಗೆ ಪ್ರಚೋದನೆ ನೀಡಿದೆ.

ಈ ಸಂಗ್ರಹಾಲಯದ ವಿಶೇಷ ಆಕರ್ಷಣೆಯೆಂದರೆ ಯುದ್ಧ ನೌಕೆ ಐ.ಎನ್.ಎಸ್. ಚಾಪೆಲ್. ಈ ನೌಕೆಯು ಸರಿಸುಮಾರು 245 ಟನ್ ತೂಕದ್ದಾಗಿದ್ದು, 38.6 ಮೀ ಉದ್ದ ಹಾಗೂ 7.6ಮೀ ಎತ್ತರ ಹೊಂದಿದೆ. 24ಕೀ. ಮೀ. ಸುತ್ತಳತೆಯಲ್ಲಿ ಭೂಮಿಯಿಂದ ಭೂಮಿಗೆ ಕ್ಷಿಪಣಿಗಳನ್ನು ಹಾರಿಬಿಡುವ ಸಾಮರ್ಥ್ಯ ಹೊಂದಿರುವ ಈ ನೌಕೆಯು  ಶತ್ರು ಯುದ್ಧ ವಿಮಾನಗಳನ್ನು ಹೊಡೆದುರುಳಿಸುವಲ್ಲಿ ಬಳಕೆಯಾಗಿತ್ತು.

ಸುದೀರ್ಘ 29 ವರ್ಷಗಳ ಕಾಲ ಭಾರತೀಯ ನೌಕಾಸೇನೆಯಲ್ಲಿ ಕಾರ್ಯ ನಿರ್ವಹಿಸಿದ ( 1976 ರಿಂದ 2005 ರವರೆಗೆ ) ಚಾಪೆಲ್ ನೌಕೆಯನ್ನು  2006 ರ ಏಪ್ರಿಲ್ ತಿಂಗಳಿನಲ್ಲಿ ಸೇನೆಯು ಸಂಗ್ರಹಾಲಯವನ್ನು ನಿರ್ಮಿಸಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತು. ವಿವಿಧ ಪಂಚಾಯಿತಿ ಹಾಗೂ ಜನರ ಅವಿರತ ಪರಿಶ್ರಮದಿಂದಾಗಿ ಸುಮಾರು 1.73 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಸ್ತುತ ಸಂಗ್ರಹಾಲಯವು 2006ರ ನವೆಂಬರ್ 7ರಂದು ಲೋಕಾರ್ಪಣೆಗೊಂಡಿದೆ.

ಚಿಕ್ಕಚಿಕ್ಕ ಮಾರ್ಪಾಟು
ಚಾಪೆಲ್ ಯುದ್ಧನೌಕೆಯಲ್ಲಿ ಚಿಕ್ಕ ಮಾರ್ಪಾಟು ಮಾಡಲಾಗಿದೆ. ಉಳಿದಂತೆ ಯಥಾಸ್ಥಿತಿಯನ್ನೇ ಉಳಿಸಿಕೊಳ್ಳಲಾಗಿದೆ. 7 ಹವಾನಿಯಂತ್ರಕ ಹಾಗೂ ಒಂದು 50 ಇಂಚಿನ ಎಲ್‌ಸಿ.ಡಿ. ಟಿ.ವಿ.ಯನ್ನು ನೌಕೆಯೊಳಗೆ ಅಳವಡಿಸಲಾಗಿದ್ದು, ಒಂದು ಪುಟ್ಟ ಸಭಾಂಗಣವೂ ನಿರ್ಮಿತಗೊಂಡಿದೆ. ಹವಾನಿಯಂತ್ರಿತ ಸಭಾಂಗಣದಲ್ಲಿರುವ ಟಿ.ವಿ.ಯಲ್ಲಿ ಭಾರತೀಯ ಸೇನಾ ನೆಲೆಗಳು, ನೌಕಾಸೇನಾ ಕಾರ್ಯವೈಖರಿ, ಕಡಲ್ಗಳ್ಳರನ್ನು ಹತ್ತಿಕ್ಕುವ ಪರಿ, ಯುದ್ಧ ಸಂದರ್ಭದಲ್ಲಿನ ಚಿತ್ರದ ತುಣುಕುಗಳನ್ನೊಳಗೊಂಡ, ಸಂಕ್ಷಿಪ್ತ ಆದರೆ ಮಾಹಿತಿ ಪೂರ್ಣ 15ನಿಮಿಷಗಳ ದೃಶ್ಯಾವಳಿಗಳನ್ನು ತೋರಿಸಲಾಗುತ್ತದೆ.

ಇದಲ್ಲದೇ ನೌಕೆಯೊಳಗೆ ನೌಕಾಪಡೆಯ  ರ‍್ಯಾಂಕಿಂಗ್ ಪಟ್ಟಿ, ನೌಕೆಯ ಚಾಲಕ, ಅಡುಗೆಯವ, ಕ್ಯಾಪ್ಟನ್ ಮುಂತಾದವರ ಪ್ರತಿಕೃತಿಗಳೂ ಇಲ್ಲಿವೆ. ಇವು ಕಾರ್ಯನಿರತ ಯುದ್ಧನೌಕೆಯೊಂದನ್ನು ಪ್ರವೇಶಿಸಿದ ಅನುಭವನ್ನು ನೀಡಬಲ್ಲದಾಗಿದೆ.

ವಿದ್ಯಾರ್ಥಿಗಳಿಗೆ ಉಪಯೋಗ
ನೌಕೆಯೊಳಗಿನ ಬೃಹತ ಡಿಸೇಲ್ ಯಂತ್ರಗಳು, ಜನರೇಟರ್‌ಗಳು ಹಾಗೂ ಕ್ಷಿಪಣಿ ಉಡ್ಡಕಗಳು ಯಂತ್ರಲೋಕದ ಅಗಾಧತೆಯನ್ನು ಪರಿಚಯಿಸುವುದರೊಂದಿಗೆ ಮೆಕ್ಯಾನಿಕಲ್ ವಿಷಯವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದರೆ ತಪ್ಪಾಗಲಾರದು.

ನೌಕೆಯ ಮೇಲೇರಿ ರಮ್ಯ ಕಡಲ ತೀರವಲ್ಲದೇ ಸುತ್ತಲ ಪರಿಸರದ ಸೌಂದರ್ಯವನ್ನು ಸವಿಯಬಹುದಾಗಿದೆ. ನೌಕಾ ವೀಕ್ಷಣೆಗೆ ಕಡಿಮೆ ದರದ ಟಿಕೇಟನ್ನು ನಿಗದಿಪಡಿಸಲಾಗಿದ್ದು, ಈ ಹಣವನ್ನು ಸಂಗ್ರಹಾಲಯದ ಅಭಿವೃದ್ಧಿಗೆ ಬಳಸಲಾಗುತ್ತದೆ.

ಈ ಸಂಗ್ರಹಾಲಯದ ಮತ್ತೊಂದು ಅಂಗವೆಂದರೆ ಮೇಜರ್ ರಾಮಾ ರಾಘೋಬಾ ರಾಣೆಯವರ ಪ್ರತಿಮೆ. ಸ್ವತಂತ್ರ ಭಾರತದ ಪ್ರಪ್ರಥಮ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಇವರು ಕಾರವಾರದಲ್ಲಿ ಜನಿಸಿದ್ದರೆಂಬುದು ಈ ನೆಲದ ಹೆಮ್ಮೆಯಲ್ಲೊಂದು. ಮೇಜರ್ ರಾಣೆಯವರ ಜನನ, ಸೇವಾವಧಿ, ಸಾಧನೆಗಳನ್ನೊಳಗೊಂಡ ಫಲಕವನ್ನು ಈ ಪ್ರತಿಮೆಯ ಸುತ್ತ ಲಗತ್ತಿಸಲಾಗಿದೆ.

ಇದರೊಂದಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 20 ವೀರರ ಹೆಸರುಗಳನ್ನೊಳಗೊಂಡ ಶಿಲಾಶಾಸನವನ್ನು ಸ್ಥಾಪಿಸಲಾಗಿದ್ದು, ಇದು ಆ ಮಹಾನ್ ದೇಶಭಕ್ತರಿಗೆ ಸಂದ ಕಿರುಗೌರವವೆನ್ನಲಡ್ಡಿಯಿಲ್ಲ. ಅಲ್ಲದೇ ಈ ಸಂಗ್ರಹಾಲಯವು ಸರಳ- ಸುಂದರ ಉದ್ಯಾನ, ವಿಶ್ರಮಿಸಲು ಆಸನಗಳು, ಪುಟ್ಟ ಕಾರಂಜಿ, ಬಿಸಿಲು- ಮಳೆಗಳಲ್ಲಿ ಆಶ್ರಯಿಸಬಹುದಾದ ವಿಶ್ರಾಂತಿ ಗೋಪುರ, ನೌಕೆಯ ಕ್ಷಿಪಣಿಗಳ ಮಾದರಿ, ತೂಗೂಯ್ಯಾಲೆ ಮುಂತಾದ ಮಕ್ಕಳಾಟಿಕೆಗಳಿಂದ ಕೂಡಿ ಸೊಗಸಾಗಿದೆ.

ವೈವಿಧ್ಯಮಯ ತಾಣ
ರಾಷ್ಟ್ರೀಯ ಹೆದ್ದಾರಿ 17ರ ಪಕ್ಕದಲ್ಲಿಯೇ ಪ್ರತಿಷ್ಠಾಪಿಸಲ್ಪಟ್ಟಿರುವ ಯುದ್ಧನೌಕಾ ಸಂಗ್ರಹಾಲಯವು ಕಾರವಾರ ನಗರದಿಂದ ಅನತಿ ದೂರದಲ್ಲಿದ್ದು ಪ್ರಕೃತಿ ಪ್ರಿಯರೊಂದಿಗೆ ಸೇನಾಸಕ್ತರನ್ನು ಸೆಳೆಯುವರಲ್ಲಿ ಸಂಶಯವಿಲ್ಲ. ಸಂಗ್ರಹಾಲಯದಿಂದ ಕೆಲವೇ ಅಂತರದಲ್ಲಿ ಸಾಗರ ಮತ್ಸ್ಯಾಲಯ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರಗಳಿದ್ದು, ವಿಜ್ಞಾನ ಕೇಂದ್ರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದ ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಮಾದರಿಗಳಿವೆ.

ಸದಾಶಿವಗಡ ಕೋಟೆ, ಕಾಳಿ ಸಂಗಮ, ದೇವಬಾಗ ಬೀಚ್, ಕೂರ್ಮಗಡ, ಕಾಳಿದ್ವೀಪ, ಕದ್ರಾ ಜಲಾಶಯ, ಕದ್ರಾದ ವಜ್ರ ಜಲಪಾತ ಮೊದಲಾದವು ಸಂಗ್ರಹಾಲಯದ ಸಮೀಪದಲ್ಲಿನ ಪ್ರೇಕ್ಷಣೀಯ ಸ್ಥಳವಾಗಿವೆ. ದೇಶದಲ್ಲಿ ವಿರಳಾತಿವಿರಳ ಯುದ್ಧನೌಕಾ ಸಂಗ್ರಹಾಲಯವು (ಇದು ಬಿಟ್ಟರೆ ಇರುವುದು ಕೇವಲ ಮುಂಬೈ ಹಾಗೂ ವಿಶಾಖಪಟ್ಟಣದಲ್ಲಿ) ನಮ್ಮ ನಾಡಿನಲ್ಲಿಯೇ ಇರುವುದು ನಮ್ಮೆಲ್ಲರ ಸೌಭಾಗ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT