ನಾವು ನೀಡಿರುವ ಎಲ್ಲ ಸಂಕಲ್ಪಗಳನ್ನೂ ಈಡೇರಿಸುವ ವಿಶ್ವಾಸ ನನ್ನಲ್ಲಿದೆ. ‘ಕೃಷಿ ಕರ್ಮಣ ಪ್ರಶಸ್ತಿ’ ಪಡೆದ ಎಲ್ಲ ರೈತರಿಗೂ ಧನ್ಯವಾದಗಳು. ಕರ್ನಾಟಕದ ರೈತರಿಗೆಲ್ಲ ಸಂಕ್ರಾಂತಿಯ ಶುಭಾಶಯಗಳು.
ಕರ್ನಾಟಕದಲ್ಲಿ ಜಲ ಸಂಕಷ್ಟ ಎದುರಾಗಿದೆ. ಬೇರೆ ರಾಜ್ಯಗಳಲ್ಲೂ ಇದರ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಅಟಲ್ ಭೂ ಜಲ ಮಿಷನ್ ಅನ್ನು ಪರಿಚಯಿಸಲಾಗಿದೆ. ಏಳು ರಾಜ್ಯಗಳಲ್ಲಿ ಅಂತರ್ಜಲ ಮಟ್ಟವನ್ನು ಮೇಲೆತ್ತುವ ಕಾರ್ಯ ಈ ಯೋಜನೆ ಅಡಿಯಲ್ಲಿ ಆಗಲಿದೆ.
ಮೀನುಗಾರಿಕೆ ಹೆಚ್ಚಿಸಲು ಅವಕಾಶಗಳಿವೆ. ಅದಕ್ಕಾಗಿಯೇ ಮೂರು ಸ್ತರದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಆದ್ಯತೆ ನೀಡುವುದು, ಆರ್ಥಿಕ ನೆರವು ನೀಡುವುದು, ನೀಲಿ ಕ್ರಾಂತಿ ಮೂಲಕ ಮೂಲ ಸೌಕರ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಮೂಲಸೌಕರ್ಯ ಕಲ್ಪಿಸಲು 7 ಸಾವಿರ ಕೋಟಿ ಒದಗಿಸಲಾಗುತ್ತಿದೆ.
ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನೂ ವಿತರಣೆ ಮಾಡಲಾಗುತ್ತಿದೆ.
ಸಾಗರಾಳದ ಮೀನುಗಾರಿಕೆಗೆ ನೆರವಾಗಲು ತಂತ್ರಜ್ಙಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇಸ್ರೋ ಇದಕ್ಕೆ ನೆರವು ನೀಡುತ್ತಿದೆ. ದೋಣಿಗಳ ಮೇಲ್ದರ್ಜೆಗೆ 2 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ.
ಕಾಫಿ ಬೆಳೆ ಕರ್ನಾಟಕದ ಹೆಗ್ಗುರುತು. ಕಾಫಿ ಬೆಳೆಯ ಪ್ಯಾಕಿಂಗ್ನಿಂದ ಹಿಡಿದು ಮಾರುಕಟ್ಟೆ ವರೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿಯಲ್ಲಿ ರಬ್ಬರ್ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ರಬ್ಬರ್ ಬೆಳೆ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.
ಅರಿಶಿಣದ ಉತ್ಪಾದನೆ ಐದು ವರ್ಷಗಳಲ್ಲಿ ಹೆಚ್ಚಾಗಿದೆ. ಈ ಬೆಳೆಯ ಮೇಲೆ ಸಂಶೋಧನೆಯನ್ನೂ ಆರಂಭಿಸಿದ್ದೇವೆ. ತೆಲಂಗಾಣ ಅರಿಶಿನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕವೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಉತ್ಪಾದನೆ ಮಾಡಿದೆ.
ಸಾಂಬಾರ ಪದಾರ್ಥಗಳ ರಫ್ತಿನಲ್ಲಿ ಭಾರತ ಸಾಧನೆ ಮಾಡಿದೆ. 19 ಸಾವಿರ ಕೋಟಿ ರೂಪಾಯಿಗಳಷ್ಟು ಮಸಾಲೆ ಪದಾರ್ಥಗಳನ್ನು ಭಾರತ ಇಂದು ರಫ್ತು ಮಾಡಿದೆ.
ದಕ್ಷಿಣ ಭಾರತದಲ್ಲಿ ತೆಂಗು, ಕಾಫಿ, ಗೋಡಂಬಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತೆಂಗು ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಗೋಡಂಬಿ ಹೆಚ್ಚು ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಬೆಳಗಾವಿ ದಾಳಿಂಬೆ, ಚಿಕ್ಕಬಳ್ಳಾಪುರ ಬೆಂಗಳೂರಿನ ಗುಲಾಬಿ, ಚಿಕ್ಕಮಗಳೂರಿನ ಕಾಫಿ ಬೆಳೆಯ ಕ್ಲಸ್ಟರ್ ನಿರ್ಮಾಣ ಮಾಡುವ ಉದ್ದೇಶವಿದೆ.
ಆಹಾರ ಪದಾರ್ಥಗಳ ರಫ್ತಿನಲ್ಲಿ ದಕ್ಷಿಣ ಭಾರತ ಹಿಂದಿನಿಂದಲೂ ಶಕ್ತಿ ಹೊಂದಿದೆ. ಇದರ ಆಧಾರದ ಮೇಲೆ ಹೊಸ ದೇಶ (New India) ನಿರ್ಮಾಣ ಮಾಡುತ್ತೇವೆ. – ಮೋದಿ