ಇವರು ಕೈಯಲ್ಲಿ ಲೇಖನಿ ಹಿಡಿದರೆ ವಿಸ್ಮಯಕಾರಿ ಸಂಗತಿಯನ್ನು ಅನಾವರಣಗೊಳಿಸುತ್ತಾರೆ. ನಿಮ್ಮ ಹೆಸರು ಹೇಳಿ ಎಂದು ಅಕ್ಷರವನ್ನು ಪೋಣಿಸುತ್ತಾ ಅಚ್ಚರಿ ಮೂಡಿಸುತ್ತಾರೆ. ಏನಿರಬಹುದು ಎಂದು ಊಹಿಸಿ ನೋಡಿದಾಗ ನಮ್ಮ ಹೆಸರಿನಲ್ಲಿ ಗಣಪನ ಮುಖ ಒಂದು ನಿಮಿಷದಲ್ಲಿ ಸಿದ್ಧವಾಗುತ್ತದೆ. ನಮ್ಮ ಹೆಸರಿನಲ್ಲಿ ಮೂಡಿಬಂದ ಅಕ್ಷರ ಗಣಪ ನೋಡಿದ ಕ್ಷಣ ಎಂಥವರಿಗಾದರೂ ಸಂತೋಷವಾಗಲೇ ಬೇಕು.
ಯಾರಾದರೂ ಸ್ನೇಹಿತರು ಸಿಕ್ಕರೆ ಸಾಕು ಒಂದು ಬಿಳಿಯ ಹಾಳೆಯನ್ನು ತೆಗೆದುಕೊಂಡು ಲೇಖನಿಯಿಂದ ಅಕ್ಷರಗಳಲ್ಲಿ ಅಂದರೆ ಎರಡಕ್ಷರವಿರಲಿ ಅಥವಾ 10 ಅಕ್ಷರವಿರಲಿ, ನಮ್ಮ ಮುಂದೆ ಕ್ಷಣಮಾತ್ರದಲ್ಲಿ ಹೆಸರಿನ ಗಣಪ ಪ್ರತ್ಯಕ್ಷ. ಅವರವರ ಹೆಸರಿನಲ್ಲಿ ಗಣೇಶನ ಕಲಾಕೃತಿಯನ್ನು ಬಿಡಿಸುವ ಕಲಾವಿದ ವೆಂಕಟೇಶ್ ಎಲ್ಲೂರು. ಇವರು ಬೆಂಗಳೂರಿನ ಆರ್.ಟಿ.ನಗರದ ನಿವಾಸಿ. ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಪ್ರವೃತ್ತಿಯಲ್ಲಿ ಕಲಾವಿದ.
ಮೊದಲಿಂದಲೂ ಕೆಲವು ಹವ್ಯಾಸಗಳನ್ನು ಬೆಳೆಸಿಕೊಂಡು ಬಂದಿದ್ದಾರೆ. ವೆಂಕಟೇಶ್ ಅವರ ಕಲಾ ಪ್ರತಿಭೆಯನ್ನು ನೋಡಿದ ಅಭಿಮಾನಿಗಳು ಇವರಲ್ಲಿ ಗಣೇಶನ ಕಲಾಕೃತಿಗಳನ್ನು ಮಾಡಿಸಿಕೊಂಡು ಉಡುಗೊರೆಯಾಗಿ ನೀಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಮನಮೋಹನ್ಸಿಂಗ್, ಸೋನಿಯಾ ಗಾಂಧಿ, ಪ್ರಿಯಾಂಕ ವಾದ್ರಾ, ಎಸ್.ಎಂ.ಕೃಷ್ಣ, ಧಿರೂಭಾಯಿ ಅಂಬಾನಿ, ಪಂಡಿತ್ ರವಿಶಂಕರ್, ಬಾಬಾ ರಾಮ್ದೇವ್, ಸಚಿನ್ ತೆಂಡೂಲ್ಕರ್, ಎಂ.ಎಸ್. ದೋನಿ, ಪ್ರತಿಭಾ ಪಾಟೀಲ್ ಅವರ ನಾಮಧೇಯದಲ್ಲಿ ಅಕ್ಷರಗಳನ್ನು ಹೆಣೆದು ಗಣಪನ ಕಲಾ ಕೃತಿಗಳನ್ನು ಮಾಡಿಕೊಟ್ಟಿದ್ದಾರೆ.
ಇವರು ಸುಮಾರು 15ರಿಂದ 20 ಸಾವಿರಕ್ಕಿಂತಲೂ ಹೆಚ್ಚು ವಿವಿಧ ಭಂಗಿಯ ಗಣೇಶನ ಕಲಾಕೃತಿಗಳನ್ನು ರಚಿಸಿದ್ದಾರೆ. 1970ರಿಂದಲೂ ಕಲಾವಿದನಾಗಬೇಕೆಂಬ ಬಯಕೆ ಇದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ನಂತರ ತಮಗೆ ಅರಿವಿಲ್ಲದಂತೆ ಕಲಾಕೃತಿಯನ್ನು ರಚಿಸಿ ರಾಷ್ಟ್ರ–ರಾಜ್ಯ ಮಟ್ಟದಲ್ಲಿ ಹಲವಾರು ಕಮ್ಮಟ ಮತ್ತು ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಇಂತಹ ಇವರ ವಿನೂತನ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ದೂರವಾಣಿ ಸಂಖ್ಯೆ: 9341210007. ಅಂತರ್ಜಾಲ ತಾಣ www.myganesha.com v
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.