ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ನೇತ್ರ ಚಿಕಿತ್ಸೆ, ನುರಿತ ನೇತ್ರ ವೈದ್ಯರಿಗೆ ಬೇಡಿಕೆ ವ್ಯಾಪಕವಾಗಿ ಹೆಚ್ಚುತ್ತಿದೆ. ಏಕೆಂದರೆ ನಮ್ಮಲ್ಲಿ 120 ಲಕ್ಷಕ್ಕೂ ಹೆಚ್ಚು ಅಂಧರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ.
2020ರ ವೇಳೆಗೆ ವಾರ್ಷಿಕ 25000 ನೇತ್ರ ವೈದ್ಯರು ಹಾಗೂ 20,000 ಮಧ್ಯ ಸ್ತರದ ನೇತ್ರ ವೈದ್ಯ ಸಹಾಯ ಸಿಬ್ಬಂದಿ ಬೇಕು ಎಂದು ಅಂದಾಜು. 60 ವರ್ಷಗಳಿಂದ ನೇತ್ರ ವೈದ್ಯಕೀಯಕ್ಕೆ ಸಂಬಂಧಿಸಿದ ಸಲಕರಣೆ, ಸಾಧನಗಳನ್ನು ಉತ್ಪಾದಿಸುವ ಜರ್ಮನಿ ಮೂಲದ ಜ್ಯೂಡರ್ ಎಜಿಯ ಅಧೀನ ಸಂಸ್ಥೆ ಜ್ಯೂಡರ್ ಏಷ್ಯ ಪೆಸಿಫಿಕ್ ಮೊದಲ ಬಾರಿ ಕಂಚಿ ಕಾಮಕೋಟಿ ಪೀಠದ ಶಂಕರ ನೇತ್ರಾಲಯದ ಜೊತೆ ಸಹಭಾಗಿತ್ವ ಏರ್ಪಡಿಸಿಕೊಂಡಿದೆ.
ಹಳೆ ಏರ್ಪೋರ್ಟ್ ರಸ್ತೆಯಲ್ಲಿ ಕಾರ್ಯಾರಂಭ ಮಾಡಿದ ಎಸ್ಜಿಸಿಸಿ (ಶಂಕರ ಜ್ಯೂಡರ್ ಕಾಂಪಿಟೆನ್ಸ್ ಸೆಂಟರ್) ಮೂಲಕ ಶಸ್ತ್ರ ಚಿಕಿತ್ಸಕರು, ವೈದ್ಯ ಸಹಾಯಕರು ಮತ್ತು ನೇತ್ರ ಆರೋಗ್ಯ ವಲಯದ ವೃತ್ತಿಪರರಿಗೆ ನೇತ್ರ ವೈದ್ಯಕೀಯದ ಫಾಕೋಮ್ಯುಲಿಸಿಫಿಕೇಷನ್ ಮತ್ತು ವಿಟ್ರೊರೆಟಿನಲ್ ಶಸ್ತ್ರಚಿಕಿತ್ಸೆ ಕುರಿತು ತರಬೇತಿ ನೀಡಲಾಗುತ್ತದೆ.
ಇಲ್ಲಿ ಆಧುನಿಕ ಚಿಕಿತ್ಸೆ, ಸಾಧನಗಳು ಇರಲಿದ್ದು ಕ್ಯಾಟರಾಕ್ಟ್, ವಿಟ್ರೊರೆರ್ಟಿನಲ್ ಮುಂತಾದ ಸಮಸ್ಯೆ ಕುರಿತ ಶಸ್ತ್ರಚಿಕಿತ್ಸೆ ಸುಲಭವಾಗಲಿದೆ. ರೋಗಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಈ ಕೇಂದ್ರವನ್ನು ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದ ಹೆಚ್ಚುವರಿ ಪ್ರಧಾನ ನಿರ್ದೇಶಕ ಡಾ. ಎ.ಎಸ್. ರಾಠೋಡ್ ಉದ್ಘಾಟಿಸಿದರು. ಶಂಕರ ಚಿಕಿತ್ಸಾಲಯದ ಸಂಸ್ಥಾಪಕ ಡಾ. ಆರ್.ವಿ. ರಮಣಿ, ಜ್ಯೂಡರ್ ಏಷ್ಯಾ ಎಂಡಿ ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.