ಸಭಾಂಗಣ ಭರ್ತಿಯಾಗಿತ್ತು. ದೊಡ್ಡ ತಾರಾ ಬಳಗವೇ ಅಲ್ಲಿತ್ತು. ಎಲ್ಲರ ಮೊಗದಲ್ಲಿ ಖುಷಿಯಿತ್ತು. ಅದು ‘ಖುಷಿ ಖುಷಿಯಾಗಿ’ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆಯ ಸಮಾರಂಭ.
ತೆಲುಗಿನ ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ವಿ. ನಾಗೇಂದ್ರ ಪ್ರಸಾದ್ ಗೀತರಚನೆಗೆ ಅಂಕಿತ್ ತಿವಾರಿ, ಅದ್ನಾನ್ ಸಾಮಿ, ಸಂತೋಷ್, ಅನುರಾಧಾ ಭಟ್, ದಿವ್ಯಾ, ಶರ್ಮಲಿ ಕಂಠ ನೀಡಿದ್ದಾರೆ. ಸ್ವತಃ ಅನೂಪ್ ಅವರೇ ‘ಅರೆರೆ ನಗುತಾಳೆ...’ ಹಾಡಿಗೆ ದನಿಯಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿರುವ ‘ಖುಷಿ ಖುಷಿಯಾಗಿ’ ಚಿತ್ರದಲ್ಲಿ ಕ್ಯೂಟ್ ಬೇಬಿ ಅಮೂಲ್ಯ ಮತ್ತು ಆಂಧ್ರ ಬೆಡಗಿ ನಂದಿನಿ ರೈ ನಾಯಕಿಯರು. ವಸ್ತ್ರ ವಿನ್ಯಾಸಕರಾಗಿ ಗುರ್ತಿಸಿಕೊಂಡಿದ್ದ ಯೋಗಿ ಜಿ. ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನ. ಯೋಗಿ ಕೈ ಚಳಕದಿಂದಾಗಿ ನಾಯಕಿಯರಿಬ್ಬರೂ ಸಾಕಷ್ಟು ಗ್ಲಾಮರ್ ಹಾಗೂ ಕಲರ್ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ತೆಳ್ಳಗಾಗಿರುವ ಗಣೇಶ್ ಅವರು ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ಹೊಸ ಶೈಲಿಯ ನೃತ್ಯವನ್ನೂ ಮಾಡಿದ್ದಾರೆ.
ಈ ಹಿಂದೆ ‘ಜಂಬೂಸವಾರಿ’ ಚಿತ್ರ ನಿರ್ಮಿಸಿದ್ದ ತೆಲುಗಿನ ನಿರ್ಮಾಪಕರಾದ ಹರಿಪ್ರಸಾದ್ ರಾವ್ ಈ ಚಿತ್ರಕ್ಕೂ ಹಣ ಹೂಡಿದ್ದಾರೆ. ‘ಟೋಪಿವಾಲ’, ‘ಬಹದ್ದೂರ್’ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಶ್ರೀಶ ಕ್ಯಾಮೆರಾ ನಿರ್ವಹಿಸಿದ್ದಾರೆ. ನಟ ಶಿವರಾಜ್ಕುಮಾರ್ ಸೀಡಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ, ಲಹರಿ ಸಂಸ್ಥೆಯ ವೇಲು, ಸಂಕಲನಕಾರ ಜೋ.ನಿ. ಹರ್ಷ, ಗಣೇಶ್ ಪತ್ನಿ ಶಿಲ್ಪಾ ಸಮಾರಂಭದಲ್ಲಿ ಹಾಜರಿದ್ದರು.