ರಾಯಚೂರು: ಮಂತ್ರಾಲಯ ಮಠದ ಗೋಶಾಲೆಯಲ್ಲಿ ಸೊಳ್ಳೆಗಳಿಂದ ಹರಡಿರುವ ‘ಟ್ರೈಪಾನೊಸೋಮಿಯಾಸಿಸ್’ (ನಿದ್ರಾ ಕಾಯಿಲೆ) ಸೋಂಕಿನಿಂದ ನಾಲ್ಕು ದಿನಗಳಿಂದ 17 ಹಸುಗಳು ಮೃತಪಟ್ಟಿವೆ.
ಕಳೆದ ವಾರ ಸುರಿದ ಮಳೆಯಿಂದ ಗೋಶಾಲೆಯ ಸುತ್ತಮುತ್ತ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಅವು ಕಚ್ಚಿದ್ದರಿಂದ ಈ ಸೋಂಕು ತಗುಲಿದೆ.
ಬೆಂಗಳೂರಿನ ಪಶು ವೈದ್ಯ ವಿಜ್ಞಾನ ಸಂಸ್ಥೆ ಮತ್ತು ಕರ್ನೂಲಿನ ಪಶು ರೋಗ ಪರೀಕ್ಷಾ ಪ್ರಯೋಗಾಲಯದ ವೈದ್ಯರ ತಂಡ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಸೋಂಕು ಪೀಡಿತ ಹಸುಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ.
ಮಠದ ಸ್ಪಷ್ಟನೆ: ‘ಸೋಂಕಿನಿಂದ 10 ಹಸುಗಳು ಸಾವನ್ನಪ್ಪಿದ್ದು, ಸೋಂಕು ತಗುಲಿದ್ದ 80ಕ್ಕೂ ಹೆಚ್ಚು ಹಸುಗಳಿಗೆ ಚುಚ್ಚುಮದ್ದು ನೀಡಲಾಗಿದೆ. ಗೋಶಾಲೆಯ ಸುತ್ತಮುತ್ತ ನಿಂತ ಮಳೆ ನೀರನ್ನು ಹೊರಹಾಕಲಾಗಿದ್ದು, ಕೀಟನಾಶಕ ಸಿಂಪಡಣೆ ಮಾಡಲಾಗಿದೆ’ ಎಂದು ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ ತಿಳಿಸಿದರು.
‘ಮುಂಜಾಗ್ರತಾ ಕ್ರಮವಾಗಿ 1,150 ಹಸುಗಳು ಮತ್ತು ಮೂರು ಕುದುರೆಗಳಿಗೂ ಚುಚ್ಚುಮದ್ದು ಹಾಕಲಾಗಿದ್ದು, ಸೋಂಕು ಹತೋಟಿಯಲ್ಲಿದೆ’ ಎಂದರು.
‘ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ‘ಟಿಎಸ್ಇ’ ಜಾತಿಯ ಸೊಳ್ಳೆಗಳಿಂದ ಈ ಸೋಂಕು ಹರಡುತ್ತದೆ’ ಎಂದು ಪಶು ವೈದ್ಯಾಧಿಕಾರಿ ಹೇಳಿದರು.