ಬೆಂಗಳೂರು: ಕುಡಿಯುವುದಕ್ಕೆ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಂಡ ಬಳಿಕವೂ ತಮಿಳುನಾಡಿಗೆ 2 ಟಿಎಂಸಿ ಅಡಿಗೂ ಅಧಿಕ ನೀರು ಹರಿದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬಿಳಿಗುಂಡ್ಲುವಿಗೆ ಸೆಪ್ಟೆಂಬರ್ 20ರಿಂದ 29ರವರೆಗೆ 2.04 ಟಿಎಂಸಿ ಅಡಿ ನೀರು ಹರಿದಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಮಲೆಮಹದೇಶ್ವರ ಬೆಟ್ಟ, ಹನೂರು, ಚಂಗಡಿ, ರಾಂಪುರ, ಹೊಗೆನಕಲ್ ಜಲಾಶಯ ಸೇರಿದಂತೆ ಹಲವು ಪ್ರದೇಶಗಳು ಹಾಗೂ ತಮಿಳುನಾಡಿನ ಪಾಲಾರ್, ತಾಳವಾಡಿ ಇತರೆ ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಬಿಳಿಗುಂಡ್ಲುವಿನಲ್ಲಿ ಒಳಹರಿವು ಹೆಚ್ಚಿದೆ.
ಈ ಮಧ್ಯೆ, ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಿಗೆ ಗುರುವಾರ ಒಟ್ಟು 8475 ಕ್ಯುಸೆಕ್ ನೀರು ಹರಿದು ಬಂದಿದೆ. ಕೆಆರ್ಎಸ್ಗೆ 2060, ಕಬಿನಿಗೆ 2000, ಹಾರಂಗಿ 2400 ಹಾಗೂ ಹೇಮಾವತಿಗೆ 2015 ಕ್ಯುಸೆಕ್ ನೀರು ಹರಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. 124.8 ಅಡಿ ಸಾಮರ್ಥ್ಯ ಇರುವ ಕೆಆರ್ಎಸ್ನಲ್ಲಿ ನೀರಿನ ಮಟ್ಟ 85.7 ಅಡಿಗೆ ಇಳಿದಿರುವುದರಿಂದ ಕುಡಿಯಲು ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಕಾವೇರಿ ನೀರು ಬಿಡದಿರುವ ಬಗ್ಗೆ ರಾಜ್ಯ ಸರ್ಕಾರ ಸೆ.21ರಂದು ನಿರ್ಣಯ ತೆಗೆದುಕೊಂಡಿತ್ತು.