ಹೈದರಾಬಾದ್: ತೆಲಂಗಾಣ ರಾಜ್ಯ ರಚನೆಯಾದ ಎರಡು ವರ್ಷಗಳ ಬಳಿಕ ನೂತನವಾಗಿ 21 ಹೊಸ ಜಿಲ್ಲೆಗಳನ್ನು ಮಂಗಳವಾರ ರಚಿಸಲಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಸ್ವಂತ ಕ್ಷೇತ್ರವಾದ ಮೆದಕ್ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಚಿಸಿರುವ ಸಿದ್ದಿಪೇಟ್ ಜಿಲ್ಲೆಗೆ ಚಾಲನೆ ನೀಡಿದರು.
ವಿಜಯದಶಮಿಯಂದೇ ಹೊಸ ಜಿಲ್ಲೆಗಳಿಗೆ ಚಾಲನೆ ನೀಡಿದ್ದರಿಂದ ರಾಜ್ಯದಾದ್ಯಂತ ಸಂಭ್ರಮ ನೆಲೆಸಿತ್ತು. 2014ರ ಜೂನ್ 4ರಂದು ಆಂಧ್ರಪ್ರದೇಶದಿಂದ ಹೊರಬಂದ ತೆಲಂಗಾಣ 29ನೇ ರಾಜ್ಯವಾಗಿ ಸ್ಥಾಪನೆಯಾಗಿತ್ತು.
ಉತ್ತಮ ಆಡಳಿತ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶದಿಂದ ಹೊಸ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ರಾಜ್ಯ ರಚನೆ ಸಂದರ್ಭ ಚಂದ್ರಶೇಖರ್ ರಾವ್ ಅವರು ಹೇಳಿದ್ದರು.
ಹೊಸ ಜಿಲ್ಲೆಗಳೊಂದಿಗೆ ಮಂಡಲಗಳು, ಕಂದಾಯ ವಿಭಾಗ ಮತ್ತು ಇತರ ಆಡಳಿತ ಘಟಕಗಳನ್ನೂ ಸಹ ಇದೇ ವೇಳೆ ಮರು ಸ್ಥಾಪಿಸಲಾಗಿದೆ.