ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳ ಸಮುದಾಯಗಳ ತವಕ–ತಲ್ಲಣಗಳ ಕಥನ

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ‘ಡಾ. ಬಿ.ಆರ್‌. ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ’ಯು ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯಗಳ ಅಧ್ಯಯನ ಯೋಜನೆಯಲ್ಲಿ ಎಂಟು ಪುಸ್ತಕಗಳನ್ನು ಪ್ರಕಟಿಸಿದೆ. ಇಲ್ಲಿ ಮುಕ್ರಿ, ಆಗೇರರು, ಬುಡ್ಗಜಂಗಮ, ಗಂಟಿಚೋರ್‌, ಚೆನ್ನದಾಸರ್‌, ದಕ್ಕಲಿಗ, ಶಿಳ್ಳೇಕ್ಯಾತ, ಸುಡುಗಾಡುಸಿದ್ಧ ಸಮುದಾಯಗಳ ಬದುಕಿನ ಅಧ್ಯಯನ ನಡೆಸಿ ಈ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ ಅಧ್ಯಯನಗಳು ಆಯಾ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಆಯಾಮಗಳನ್ನು ಒಳಗೊಳ್ಳಲು ಪ್ರಯತ್ನಿಸಿವೆ. ತಳಸ್ತರದಲ್ಲಿರುವ ಈ ಸಮುದಾಯಗಳು ಕರ್ನಾಟಕದಲ್ಲಿ ಯಾವ ಸ್ವರೂಪದಲ್ಲಿ ಬದುಕು ಮಾಡುತ್ತಿವೆ, ಅವುಗಳ ಒಟ್ಟಾರೆ ಚಹರೆ ಏನು ಎಂಬುದರ ಸಮೀಪದ, ವಸ್ತುನಿಷ್ಠ ನೋಟಗಳನ್ನು ಈ ಅಧ್ಯಯನಗಳು ದಾಖಲಿಸಿವೆ.

ಇವು ಮಾತ್ರವಲ್ಲದೇ ಪ್ರತಿಯೊಂದು ಸಮುದಾಯದ ಕುಲಶಾಸ್ತ್ರೀಯತೆ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ನಿಖರಾಗಿ ಗುರುತಿಸುವ ಉದ್ದೇಶ ಈ ಯೋಜನೆಗಿದೆ. ಅವರ ಪಾರಂಪರಿಕ ಕಸುಬು ಮತ್ತು ಅವರ ಬದುಕಿನಲ್ಲಿ ಆಗಿರುವ ಪಲ್ಲಟಗಳನ್ನು, ವರ್ತಮಾನದ ಬದುಕನ್ನೂ ಈ ಅಧ್ಯಯನಗಳು ಹಿಡಿದಿಡಲು ಪ್ರಯತ್ನಿಸುತ್ತವೆ. ಈ  ದಾಖಲೆಗಳನ್ನು ಆಧರಿಸಿ ಸೂಕ್ತ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸುವ ಉದ್ದೇಶ ಇದೆಯೆಂದು ಈ ಸಂಶೋಧನೆಗಳ ಮಾರ್ಗದರ್ಶಕರಾದ ಓ. ಅನಂತರಾಮಯ್ಯ, ಹಿ.ಚಿ. ಬೋರಲಿಂಗಯ್ಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದು, ಅದರಲ್ಲಿ ಯೋಜನೆಯ ಸ್ಥೂಲ ಸ್ವರೂಪವನ್ನು ಕಾಣಿಸಿದ್ದಾರೆ.

ಆಯಾ ಸಮುದಾಯಗಳ ಆಚರಣೆ, ಕುಲ, ಸಂಪ್ರದಾಯ, ಆರಾಧನೆ, ನಂಬಿಕೆಯೂ ಸೇರಿದಂತೆ ಅವರ ನಿತ್ಯದ ಬದುಕಿನ ವಿಧಾನವೂ ಕೃತಿಗಳಲ್ಲಿ ದಾಖಲಾಗಿದೆ. ಸಾಕಷ್ಟು ಅಂಕಿಅಂಶಗಳನ್ನು ಪ್ರತಿ ಅಧ್ಯಯನದಲ್ಲೂ ಕೊಡಲಾಗಿದೆ. ಇವೆಲ್ಲ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಮಾತ್ರವಲ್ಲ – ಭಾರತದ ಪ್ರಧಾನಧಾರೆಯಲ್ಲಿ ಸೇರದೇ ಬೇರೆಯಾಗಿಯೇ ಉಳಿದುಕೊಂಡಿವೆ ಎಂಬುದನ್ನು ಈ ಅಧ್ಯಯನಗಳು ತೋರುತ್ತವೆ. ಆದ್ದರಿಂದ ಈ ಅಧ್ಯಯನಗಳು ಮುಂದಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳಬಹುದು.

ಒಡೆದು ಕಾಣುತ್ತಿರುವ ಸಾಮಾಜಿಕ ಅಸಮತೋಲನವನ್ನು ಈ ಅಧ್ಯಯನಗಳು ಓದುಗರಿಗೆ ಮನವರಿಕೆ ಮಾಡಿಕೊಡುತ್ತವೆ. ಇದು ಒಂದು ಕಡೆಯಾದರೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಆದರೂ ಇವು ಮತ್ತು ಇನ್ನಿತರ ಅನೇಕ ಸಮುದಾಯಗಳು ತಮ್ಮ ಆದಿಮ ಸ್ಥಿತಿಯಲ್ಲೇ ಬಹುಪಾಲು ಉಳಿದಿರುವುದು ಸಾಮಾಜಿಕವಾಗಿ ನಾಚಿಕೆಪಡಬೇಕಾದ ಸಂಗತಿಯೇ ಆಗಿದೆ. ಹಾಗೆ ನಾಚಿಕೆ ಪಡಬೇಕಾದ ವಾಸ್ತವಿಕ ಅಂಶಗಳನ್ನು ಇಲ್ಲಿನ ಬರಹಗಳು ಎದುರಿಗಿಟ್ಟಿವೆ. ಕ್ಷೇತ್ರಕಾರ್ಯ, ಅಧ್ಯಯನದಿಂದ ರೂಪುಗೊಂಡಿರುವ ಈ ಬರಹಗಳು ‘ಅಸಮಾನ ಭಾರತ’ವನ್ನು ಅರಿಯಲು ಸಾಕಷ್ಟು ಸಹಾಯ ಮಾಡುತ್ತವೆ. ಇಲ್ಲಿ ಉಲ್ಲೇಖಗೊಂಡಿರುವ ಕೆಲವು ಅಂಶಗಳು ಜಾತಿವ್ಯವಸ್ಥೆ ಹಾಗೂ ಮನುಷ್ಯ ಜನಾಂಗದ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ಕೊಡುತ್ತವೆ.

ಆರ್ಥಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಈ ಸಮುದಾಯಗಳು ಗುರುತಿಸಿಕೊಂಡಿದ್ದು ಕಡಿಮೆ. ಹಾಗಾಗಿ ಸರಿಯಾದ ಪ್ರಾತಿನಿಧ್ಯ ಅವಕ್ಕೆ ಸಹಜವಾಗಿಯೇ ಸಿಕ್ಕಿಲ್ಲ. ಇದರ ಜೊತೆಗೆ, ಇನ್ನಿತರ ಕಾರಣಗಳೂ ಸೇರಿಕೊಂಡು ಈ ಸಮುದಾಯಗಳು ಏಕಾಂಗಿಯಾಗಿಯೇ ಬಾಳು ಸಾಗಿಸಬೇಕಾದ, ಬದುಕಲು ಪರದಾಡಬೇಕಾದ ಸ್ಥಿತಿ ಈಗಲೂ ಇದೆ. ಎಲ್ಲರ ಸಮಗ್ರ ಸುಧಾರಣೆ, ಅಭಿವೃದ್ಧಿ ಆಗುತ್ತಿದೆ ಎಂಬ ಎಲ್ಲ ಸರ್ಕಾರಗಳ ಮಾತನ್ನು ಈ ಅಧ್ಯಯನಗಳು ಸುಳ್ಳು ಎಂದು ಮತ್ತೆಮತ್ತೆ ಸಾಬೀತು ಮಾಡುತ್ತ ಹೋಗುತ್ತವೆ. ಆದರೆ, ಸರ್ಕಾರದ ಸಂಸ್ಥೆಯೇ ಮಾಡಿಸಿರುವ ಈ ಅಧ್ಯಯನಗಳು ಈ ಸಮುದಾಯಗಳ ಜೀವನದಲ್ಲಿ ಏನನ್ನಾದರೂ ಬದಲಾವಣೆ ತರುತ್ತವೆಯೇ, ಇಲ್ಲವೇ ಅವು ಸಂಶೋಧನೆ ಮಾತ್ರವಾಗಿ ಉಳಿಯುತ್ತವೆಯೇ ಎಂಬುದಕ್ಕೆ ನಾಳಿನ ದಿನಗಳಲ್ಲಿ ಉತ್ತರ ಸಿಗಬಹುದು.

***

ಬುಡ್ಗಜಂಗಮ ಸಮುದಾಯ
(ಪರಿಶಿಷ್ಟ ಜಾತಿವರ್ಗದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಧ್ಯಯನ)
ಸಂ:
ವಡ್ಡಗೆರೆ ನಾಗರಾಜಯ್ಯ
ಪುಟ: 466, ಬೆಲೆ: 160

*
ಗಂಟಿಚೋರ್ ಸಮುದಾಯ
ಲೇ:
ಡಾ. ಅರುಣ್ ಜೋಳದಕೂಡ್ಲಿಗಿ
ಪುಟ: 320, ಬೆಲೆ: 120

*
ಆಗೇರರು
ಸಂ:
ಡಾ. ಹರಿಲಾಲ ಪವಾರ
ಪುಟ: 228, ಬೆಲೆ: 80

*
ಚೆನ್ನದಾಸರ್ ಸಮುದಾಯ
ಸಂ:
ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ
ಪುಟ:  276, ಬೆಲೆ: 80

*
ಸುಡುಗಾಡು ಸಿದ್ಧ ಸಮುದಾಯ
ಸಂ:
ಡಾ. ನಾಗಭೂಷಣ ಬಗ್ಗನಡು
ಪುಟ: 274, ಬೆಲೆ: 80

*
ದಕ್ಕಲಿಗ ಸಮುದಾಯ
ಸಂ:
ಡಾ. ಕೆ. ಕೃಷ್ಣಪ್ಪ
ಪುಟ: 214, ಬೆಲೆ:70

*
ಶಿಳ್ಳೇಕ್ಯಾತ ಸಮುದಾಯ
ಸಂ:
ಡಾ. ಎನ್‌.ಡಿ. ತಿಪ್ಪೇಸ್ವಾಮಿ
ಪುಟ: 346, ಬೆಲೆ: 120

*
ಮುಕ್ರಿ ಸಮುದಾಯ
ಸಂ:
ಎಚ್‌.ಎಸ್. ಮೋಹನ
ಪುಟ: 180, ಬೆಲೆ: 70

*
ಶಳ್ಳೇಕ್ಯಾತ ಸಮುದಾಯ
ಸಂ:
ಡಾ. ಎನ್.ಡಿ. ತಿಪ್ಪೇಸ್ವಾಮಿ
ಪುಟ: 346, ಬೆಲೆ: 120

ಮೇಲಿನ ಎಂಟೂ ಪುಸ್ತಕಗಳ ಪ್ರಕಾಶಕರು: ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರ, ಡಾ. ಬಿ.ಆರ್‌. ಅಂಬೇಡ್ಕರ್ ಭವನ, ವಸಂತನಗರ, ಬೆಂ– 52

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT