ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಮತ್ತು ಪ್ರಾರ್ಥನೆ

Last Updated 27 ಏಪ್ರಿಲ್ 2017, 4:05 IST
ಅಕ್ಷರ ಗಾತ್ರ

ಈ ಜೀವನ ಒಳಿತು ಕೆಡಕುಗಳ ಸಮ್ಮಿಶ್ರಣ. ಬದುಕಿನ ಪಯಣದಲ್ಲಿ  ದುಃಖವೂ ಇದೆ, ಸುಖವೂ ಇದೆ. ಇಲ್ಲಿ ನಡೆಯುವ ಕೆಲವು ಸಂಗತಿಗಳಷ್ಟೇ ನಮ್ಮ ನಿಯಂತ್ರಣದಲ್ಲಿರುತ್ತವೆ. ಇನ್ನು ಕೆಲವು ನಮ್ಮ ಹಿಡಿತಕ್ಕೆ ಸಿಗುವುದಿಲ್ಲ. ಒಳಿತಾದಾಗ ಹೃದಯ ಹಿಗ್ಗಿದರೆ, ಕೆಡುಕಾದಾಗ ಮನಸ್ಸು ಕುಗ್ಗುತ್ತದೆ. ಆದರೆ, ಕೆಡುಕುಗಳ ಬಗ್ಗೆಯೇ ಯೋಚಿಸುತ್ತಾ ಕೂರುವಂತೆಯೂ ಇಲ್ಲ. ಬದುಕು ಮುಂದೆ ಸಾಗಬೇಕು.

ಒಮ್ಮೊಮ್ಮೆಯಂತೂ ಕಷ್ಟಗಳ ಮಳೆಯೇ ಸುರಿದಂತೆ – ಒಂದರ ಮೇಲೊಂದು ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಪ್ರಯತ್ನದಿಂದ ಸರಿಹೋಗುವಂಥವುಗಳನ್ನೇನೋ ಸರಿಪಡಿಸಿಕೊಂಡೇವು. ಆದರೆ, ನಮ್ಮ ಪ್ರಯತ್ನದ ಹಿಡಿತಕ್ಕೇ ನಿಲುಕದ ಸಂಗತಿಗಳಿಗೇನು ಮಾಡುವುದು?

ಹತ್ತಿರದವರ ಗುಣಪಡಿಸಲಾಗದ ಕಾಯಿಲೆ, ಅಗಲಿಕೆ, ಅಪಘಾತ... ಇವುಗಳೆಲ್ಲ ನಮ್ಮ ಕೈಯಲ್ಲಿವೆಯೇ..? ಅಂತೆಯೇ ಹದಿಹರೆಯದ ಮಕ್ಕಳು ಭ್ರಮಾಲೋಕದಲ್ಲಿ ಮುಳುಗಿ ಹಾದಿ ತಪ್ಪುವುದು, ಅತ್ಯುನ್ನತ ವ್ಯಾಸಂಗ ಮಾಡಿಯೂ ಮಕ್ಕಳಿಗೆ ತಕ್ಕ ಉದ್ಯೋಗ ಸಿಗದಿರುವುದು, ಬಂಡವಾಳ ಹೂಡಿದ ಉದ್ಯಮ ಕೈ ಹತ್ತದಿರುವುದು... ಇಂತಹ ಹತ್ತಾರು ಸಂಗತಿಗಳು ನಮ್ಮ ಶ್ರಮವನ್ನು ಮೀರಿದಂಥವು. ಆದರೆ ಇವು ನಮ್ಮ ಬದುಕಿನ ಶಾಂತಿಯನ್ನು ಕದಡುವುದಂತೂ ನಿಜ.

ಕೆಲವರು ಇಂಥ ಸಂದರ್ಭದಲ್ಲಿ ಖಿನ್ನತೆಯ ಮಾಯಾಜಾಲದಲ್ಲಿ ಸಿಲುಕಿ ಅಂತರ್ಮುಖರಾಗುತ್ತಾರೆ. ತಮ್ಮ ಜೀವನದಲ್ಲಿ ನಡೆಯುತ್ತಿರುವ ಹಾಗೂ ನಡೆದುಹೋದ ಸಣ್ಣಪುಟ್ಟ ಒಳಿತನ್ನೂ ಗಮನಿಸದಂತಾಗುತ್ತಾರೆ. ತಮ್ಮ ಮನಸ್ಸನ್ನು ಬದುಕಿನಲ್ಲಿ ನಡೆದ ಕೆಟ್ಟ ಘಟನೆಗಳ ಸುತ್ತಲೇ ಕೇಂದ್ರೀಕರಿಸುತ್ತಾರೆ. ಇದು ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ ಅವರನ್ನು ಇನ್ನಷ್ಟು ಘಾಸಿಗೊಳಿಸುತ್ತದೆ.

ಆದರೆ ಬದುಕು ಯಾವಾಗಲೂ ಒಂದೇ ರೀತಿ ಇರದು. ಬದಲಾಗುವ ಕಾಲಕ್ಕೆ ತಕ್ಕಂತೆ ಜೀವನವೂ ಬದಲಾಗುತ್ತಿರುತ್ತದೆ. ಪರಿಸ್ಥಿತಿ–ಸನ್ನಿವೇಶಗಳೂ ಬದಲಾಗುತ್ತವೆ.
ಪ್ರಾರ್ಥನೆ ನಮ್ಮ ಬದುಕಿಗೆ ನೆಮ್ಮದಿ ತಂದುಕೊಡಬಲ್ಲದು. ನಮ್ಮ ಬದುಕಿನ ಮುಂದಿನ ಹಾದಿಯಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುವುದು ಸಕಾರಾತ್ಮಕ ಮನೋಭಾವವನ್ನು ಸೂಚಿಸುತ್ತದೆ. ನಂಬಿಕೆ ಹಾಗೂ ಪ್ರಾರ್ಥನೆಗೆ ಅಗಾಧವಾದ ಶಕ್ತಿಯಿದೆ. ಇದು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ನೋವಿಗೆ ಒಂದು ಬಗೆಯ ಸಾಂತ್ವನವನ್ನು ಕೊಡುತ್ತದೆ. ನಿಮ್ಮಲ್ಲಿ ಸುರಕ್ಷಾ ಭಾವವನ್ನು ತರುತ್ತದೆ.

ದಿನವೂ ಒಂದೈದು ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಳ್ಳಿರಿ. ನಿಮ್ಮ ಬದುಕಿನ ಸಮೃದ್ಧತೆಯೆಡೆಗೂ ದೃಷ್ಟಿಯನ್ನೊಮ್ಮೆ ಹಾಯಿಸಿ. ಜೀವನದಲ್ಲಿ ನಿಮಗೆ ಈವರೆಗೆ ವರದಾನವಾಗಿ ಬಂದಂತಹ ಅಂಶಗಳನ್ನು ನೆನಪಿಸಿಕೊಳ್ಳಿ. ಅದಕ್ಕಾಗಿ ಕೃತಜ್ಞತಾಭಾವವನ್ನು ತಾಳಿರಿ. ಇದರಿಂದ ನಿಮ್ಮ ಮನಸ್ಸು ಉಲ್ಲಸಿತವಾಗಿ, ಒಂದು ಬಗೆಯ ಸಂತೃಪ್ತಿ–ಸಂತಸದ ಅನುಭವ ನಿಮ್ಮದಾಗುತ್ತದೆ.

ನಿಮ್ಮ ಮುಂದಿನ ಜೀವನವು ಹೇಗಿರಬೇಕೆಂದು ಬಯಸುತ್ತೀರೋ, ಅಂತಹ ಘಟನಾವಳಿಗಳನ್ನು ನಿಮ್ಮ ಮನದಂಗಳದಲ್ಲಿ ಮುಂಚಿತವಾಗಿಯೇ ಕಲ್ಪಿಸಿಕೊಳ್ಳಿರಿ. ನೀವು ಮಾಡಲು ಹೊರಟ ಎಲ್ಲ ಕಾರ್ಯಗಳು ಯಶಸ್ವಿಯಾಗುವ ಭರವಸೆಯನ್ನು ಹೊಂದಿರಿ. ನಿಜ, ಈ ಬಗೆಯ ಸಕಾರಾತ್ಮಕ ಭರವಸೆ ನಿಮ್ಮಲ್ಲಿ ವಿಶೇಷಶಕ್ತಿಯನ್ನು ಮತ್ತು ಹುಮ್ಮಸ್ಸನ್ನು ತುಂಬುತ್ತದೆ.

ನಿಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ. ಸದಾ ಮನಸ್ಸಿಗೆ ಮುದ ನೀಡುವ ಧನಾತ್ಮಕ ಸಂಗತಿಗಳ ಬಗ್ಗೆಯೇ ವಿಚಾರ ಮಾಡಿ. ಇದು ನಿಮ್ಮ ಜೀವನ ಪ್ರೀತಿಯನ್ನು ಇಮ್ಮಡಿಗೊಳಿಸುತ್ತದೆ. ಯಾವಾಗಲೂ ಲವಲವಿಕೆಯಿಂದಿರುವ ಸ್ನೇಹಿತರೊಡನೆ ಬೆರೆಯಿರಿ. ನಿಮ್ಮ ಸಾಮರ್ಥ್ಯ ಗುರುತಿಸಿ, ಪೋಷಿಸುವ ವ್ಯಕ್ತಿಗಳೊಡನೆ ಹೆಚ್ಚು ಸಮಯ ಕಳೆಯಿರಿ.

ನಮ್ಮ ಬದುಕಿನ ಅನೇಕ ಸಮಸ್ಯೆಗಳನ್ನು ಈ ಬಗೆಯ ಸಕಾರಾತ್ಮಕ ಆಲೋಚನಾ ತಂತ್ರಗಳನ್ನು ಬಳಸಿ ಪರಿಹರಿಸಿಕೊಳ್ಳಬಹುದು. ಪ್ರಯತ್ನಿಸಿ ನೋಡ್ತೀರಲ್ವಾ...?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT