ಶಿವಮೊಗ್ಗ: ಪಕ್ಷದ ಆಂತರಿಕ ಗೊಂದಲಗಳ ನಿವಾರಣೆಗೆ ಹೈಕಮಾಂಡ್ ಶ್ರಮಿಸುತ್ತಿದೆ. ಎಂ.ಬಿ. ಭಾನುಪ್ರಕಾಶ್, ನಿರ್ಮಲ್ಕುಮಾರ್ ಸುರಾನಾ ಅವರಿಗೆ ಪಕ್ಷದ ಉನ್ನತ ಜವಾಬ್ದಾರಿ ದೊರೆಯುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಬುಧವಾರ ಅವರು ಮಾತನಾಡಿದರು.
‘ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲೇ ಶಂಕರಮೂರ್ತಿ ಮುಂದುವರಿಯುತ್ತಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ಗೆ ಬೆಂಬಲ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ನಿಷ್ಕಳಂಕ ವ್ಯಕ್ತಿತ್ವದ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್ ಸದಸ್ಯರು ನೀಡಿದ ಕಾರಣ ಮನಸ್ಸಿಗೆ ನೋವು ತಂದಿದೆ. ಅವರು ಆರೋಪಿಸಿದಂತೆ ಶಂಕರಮೂರ್ತಿ ನಡವಳಿಕೆ ಎಂದೂ ಬದಲಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾದ ಎಸ್.ಆರ್.ಪಾಟೀಲ ಅವರಿಗೆ ಸಭಾಪತಿ ಸ್ಥಾನ ದೊರಕಿಸಿಕೊಡಲು ಕಾಂಗ್ರೆಸ್ ಇಂತಹ ಕುತಂತ್ರ ನಡೆಸುತ್ತಿದೆ’ ಎಂದು ದೂರಿದರು.