ಆಸ್ತಾನ, ಕಜಕಸ್ತಾನ: ಭಯೋತ್ಪಾದನೆ ಬೆದರಿಕೆಗಳನ್ನು ಎದುರಿಸಲು ಶಾಂಘೈ ಸಹಕಾರ ಸಂಘಟನೆ ಸದಸ್ಯ ರಾಷ್ಟ್ರಗಳ ನಡುವೆ ಪ್ರಬಲ ಮತ್ತು ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಕಜಕಸ್ತಾನದ ರಾಜಧಾನಿ ಆಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಗಸಭೆಯಲ್ಲಿ ಅವರು ಶುಕ್ರವಾರ ಮಾತನಾಡಿದರು.
ಸಂಘಟಿತ ಹೋರಾಟ ನಡೆಯದಿದ್ದರೆ ಉಗ್ರರಿಗೆ ಹಣಕಾಸು ಒದಗಿಸುವುದನ್ನು, ತರಬೇತಿ ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಪರೋಕ್ಷವಾಗಿ ಇಸ್ಲಾಮಾಬಾದ್ಗೆ ಚುಚ್ಚಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಉಪಸ್ಥಿತರಿದ್ದರು.
ಭಾರತ, ಪಾಕಿಸ್ತಾನಕ್ಕೆ ಎಸ್ಸಿಒ ಸದಸ್ಯತ್ವ: ಭಾರತ ಹಾಗೂ ಪಾಕಿಸ್ತಾನಕ್ಕೆ ಶಾಂಘೈ ಸಂಘಟನೆಯ ಪೂರ್ಣ ಪ್ರಮಾಣದ ಸದಸ್ಯತ್ವ ದೊರೆತಿದೆ.
ಮಾತುಕತೆ: ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಮೋದಿ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ವಿವಾದಗಳನ್ನು ಸೂಕ್ತವಾಗಿ ನಿಭಾಯಿಸುವ ಅಗತ್ಯವನ್ನು ಪ್ರಧಾನಿ ಮೋದಿ ಅವರು ಒತ್ತಿ ಹೇಳಿದರು.
*
ಮಾನವೀಯತೆಗೆ ಭಯೋತ್ಪಾದನೆಯೇ ದೊಡ್ಡ ಬೆದರಿಕೆ. ತೀವ್ರವಾದವನ್ನು ಹತ್ತಿಕ್ಕಲು ಸಂಯೋಜಿತ ಯತ್ನದ ಅಗತ್ಯವಿದೆ. -ನರೇಂದ್ರ ಮೋದಿ,
ಪ್ರಧಾನಿ