ಮೈಸೂರು: ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದರೆ ಅದರ ಎಲ್ಲ ಶ್ರೇಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುವುದು. ರೈತರಿಗೆ ಅನುಕೂಲವಾಗುವುದಾದರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಇದರಲ್ಲಿ ‘ಇಗೊ’ ಪ್ರಶ್ನೆ ಇದೆಯೇ ಎಂಬ ಪ್ರಶ್ನೆಗೆ ಕೋಪಗೊಂಡ ಅವರು, ‘ಇಗೊ ಪ್ರಶ್ನೆ ಎಲ್ಲಿಯದು. ಸಾಲ ಮನ್ನಾ ಮಾಡಿದರೆ ಅದರ ಶ್ರೇಯಸ್ಸು ಅವರಿಗೇ ದಕ್ಕಲಿ. ನಾನೇ ಮುಂದೆ ನಿಂತು ಅವರನ್ನು ಅಭಿನಂದಿಸುತ್ತೇನೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಲ ಮನ್ನಾ ಮಾಡದಿದ್ದರೆ ಜುಲೈ 7, 8 ಮತ್ತು 9ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹ ಕೈಗೊಳ್ಳಲಾಗುವುದು. 10ರಂದು 4 ಲಕ್ಷ ರೈತರನ್ನು ಒಳಗೊಂಡ ಸಮಾವೇಶ ನಡೆಸಲಾಗುವುದು ಎಂದರು.
ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ರೈತರಿಗೆ ನೀಡಿರುವ ಸಾಲ ಮನ್ನಾ ಮಾಡುವ ವಿಚಾರವನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸಲಾಗುವುದು. ಸದ್ಯ, ಇಲ್ಲಿ ಅದರ ಚರ್ಚೆ ಬೇಡ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನ್ಯಾಯಬೆಲೆ ಅಂಗಡಿ ಮುಂದೆ ಮೋದಿ ಭಾವಚಿತ್ರ ಹಾಕಲು ಕರೆ: ಕೇಂದ್ರ ಸರ್ಕಾರವು ಪ್ರತಿ ಕೆ.ಜಿ ಅಕ್ಕಿಗೆ ₹ 29 ಹಾಗೂ ಗೋಧಿಗೆ ₹ 20 ನೀಡಿ ಖರೀದಿಸುತ್ತಿದೆ.
ಇದನ್ನೇ ರಾಜ್ಯ ಸರ್ಕಾರ ‘ಅನ್ನಭಾಗ್ಯ’ದ ಹೆಸರಿನಲ್ಲಿ ಜನರಿಗೆ ಹಂಚುತ್ತಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರ ಭಾವಚಿತ್ರ ಹಾಕಬೇಕು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರೇ ಆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.