ಕೊಪ್ಪಳ: ನಗರ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮಾಡಲು ಆಸಕ್ತರಿದ್ದೀರಾ? ತಾಂತ್ರಿಕ ನೆರವು ಬೇಕೇ? ಸರ್ಕಾರ ರೈತರಿಂದಲೇ ಒಂದು ಕಂಪೆನಿ ಸ್ಥಾಪಿಸಿ ನೆರವಾಗುತ್ತಿದೆ.
ಹೆಸರಿಗಷ್ಟೇ ಇದು ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುವ ಸಂಸ್ಥೆ. ಆದರೆ ವ್ಯವಹಾರವೆಲ್ಲವೂ ರೈತರಿಂದ ರೈತರಿಗಾಗಿ ರೈತರೇ ನಿರ್ವಹಿಸುತ್ತಿರುವ ಸಂಸ್ಥೆ. ಮುಕ್ತ ಮಾರುಕಟ್ಟೆಗಿಂತ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಇಲ್ಲಿ ಕೃಷಿ, ತೋಟಗಾರಿಕೆ ಪರಿಕರಗಳು, ಯಂತ್ರೋಪಕರಣಗಳು ದೊರೆಯುತ್ತವೆ.
ಹೀಗೆ ಬನ್ನಿ...
ಹೊಸಪೇಟೆ ರಸ್ತೆಯ ಬಿ.ಟಿ.ಪಾಟೀಲ ನಗರದ ಎರಡನೇ ಅಡ್ಡರಸ್ತೆಯ ಎಸ್ಬಿಎಚ್ ಕಾಲೊನಿಯಲ್ಲಿದೆ ಅಭಿನವಶ್ರೀ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ. 1,060 ಷೇರುದಾರರಿಂದ ಮೂರು ತಿಂಗಳ ಹಿಂದೆ ಆರಂಭವಾದ ಈ ಸಂಸ್ಥೆ ಇದುವರೆಗೆ ಸುಮಾರು ₹ 25 ಲಕ್ಷ ವಹಿವಾಟು ನಡೆಸಿದೆ. ಸರ್ಕಾರ ಮತ್ತು ಐಸಾಪ್ ಕಂಪೆನಿಯ ನೆರವು ಸೇರಿ ಒಟ್ಟು ₹ 41 ಲಕ್ಷ ಅನುದಾನ ಬಂದಿದೆ. 11 ಮಂದಿ ಆಡಳಿತ ಮಂಡಳಿಯ ನಿರ್ದೇಶಕರು ಇದ್ದಾರೆ.
ಏನೆಲ್ಲಾ ಇದೆ?
ಕೃಷಿ ಸಂಬಂಧಿತ ಪರಿಕರಗಳು ಎಲ್ಲವೂ ಇವೆ. ನೀರಾವರಿ ಸಾಮಗ್ರಿಗಳು, ರಸಗೊಬ್ಬರ, ಬಿತ್ತನೆ ಬೀಜ, ರಾಸಾಯನಿಕಗಳು, ಉಪಕರಣಗಳು, ಇದೀಗ ಸಸಿಗಳನ್ನೂ ಮಾರಾಟಕ್ಕಿಟ್ಟಿದೆ.
ರೈತರ ಉತ್ಪನ್ನಗಳ ರಕ್ಷಣೆಗಾಗಿ ಎಪಿಎಂಸಿ ಆವರಣದಲ್ಲಿ ಶೀತಲೀಕರಣ ಘಟಕವನ್ನೂ ತೆರೆದಿದೆ. ಒಟ್ಟಿನಲ್ಲಿ ರೈತರಿಗೆ ಸಮಗ್ರವಾಗಿ ನೆರವಾಗಲು ಕಂಪೆನಿ ಮುಂದಾಗಿದೆ. ಮಾಹಿತಿಗೆ: ದೂ. 08539 220344, ಮೊ. 99808 49940
ಯಂತ್ರಗಳೇ ಪ್ರಧಾನ ಆಕರ್ಷಣೆ
ಕೃಷಿ ಯಂತ್ರೋಪಕರಣೆಗಳೇ ಈ ಕೇಂದ್ರದ ಪ್ರಧಾನ ಆಕರ್ಷಣೆ. ಟಿಲ್ಲರ್, ಟ್ರ್ಯಾಕ್ಟರ್, ಗುಣಿ ತೋಡುವ, ಮರ ಕತ್ತರಿಸುವ, ನಾಟಿ ಮಾಡುವ, ಕಳೆ ಕೀಳುವ, ತೂಕ ಮಾಡುವ ಹೀಗೆ 19 ಬಗೆಯ ಯಂತ್ರಗಳು ಇಲ್ಲಿ ಬಾಡಿಗೆಗೆ ದೊರೆಯುತ್ತವೆ. ಕೆಲವು ಟಿಲ್ಲರ್, ಟ್ರ್ಯಾಕ್ಟರ್ನಂಥ ವಾಹನಗಳನ್ನು ಚಾಲಕರ ಸಹಿತ ಬಾಡಿಗೆಗೆ ನೀಡುತ್ತಾರೆ.
ಉಳಿದವುಗಳನ್ನು ಬಳಕೆ ತರಬೇತಿ, ತಾಂತ್ರಿಕ ಮಾಹಿತಿ ನೀಡಿ ರೈತರಿಗೆ ಕೊಡುತ್ತಾರೆ. ನಗರದ ಹವ್ಯಾಸಿ ಕೃಷಿಕರು, ಸಸಿ ನೆಡುವವರು, ಆಳುಗಳ ಕೊರತೆಯಿರುವವರು ಕೃಷಿ ಬದುಕಿನ ಕುತೂಹಲಿಗಳು ಇಲ್ಲಿ ಬಂದು ಯಂತ್ರಗಳನ್ನು ನೋಡುತ್ತಾರೆ. ಆಸಕ್ತರು ಸಸಿ ಖರೀದಿಸುತ್ತಾರೆ.
ಲಾಭದಾಯಕ ವಹಿವಾಟು
1,060 ಕಂಪೆನಿಯಲ್ಲಿರುವ ಷೇರುದಾರರು
ಕೈಗೆಟಕುವ ದರ ಎಲ್ಲ ಬಗೆಯ ರೈತರಿಗೆ ಮಿತದರದಲ್ಲಿ ನೆರವಾಗುವ ಉದ್ದೇಶದಿಂದ ಕಂಪೆನಿ ಕೆಲಸ ಮಾಡುತ್ತಿದೆ
₹ 25 ಲಕ್ಷ ಮೂರು ತಿಂಗಳಲ್ಲಿ ನಡೆಸಿದ ವಹಿವಾಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.