ಬೆಂಗಳೂರು: ನಗರದ ರಾಜಕಾಲುವೆ ಮೇಲೆ ನಿರ್ಮಿಸಿದ ಎಲ್ಲ ಕಟ್ಟಡಗಳೂ ಅಕ್ರಮ, ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಗುರುವಾರ ಬಿಜೆಪಿಯ ರಾಮಚಂದ್ರಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜಕಾಲುವೆಗಳ ಒತ್ತುವರಿ ಮಾಡಿರುವ ಒಟ್ಟು ಪ್ರಕರಣಗಳ ಸಂಖ್ಯೆ 1953. ಈವರೆಗೆ 1225 ಒತ್ತುವರಿ ತೆರವು ಮಾಡಲಾಗಿದೆ. 728 ಒತ್ತುವರಿ ತೆರವು ಮಾಡಬೇಕಿದೆ’ ಎಂದು ಹೇಳಿದರು.
‘ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸಲು ಬಿಬಿಎಂಪಿಯೇ ಅನುಮತಿ ನೀಡಿದೆ. ಇದು ಅಕ್ರಮವಲ್ಲವೇ, ಇವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲವೆ’ ಎಂದು ರಾಮಚಂದ್ರಗೌಡ ಪ್ರಶ್ನಿಸಿದರು.
ಬಿಬಿಎಂಪಿ ಅನುಮತಿ ನೀಡಿದ್ದರೂ ಅಂತಹ ಕಟ್ಟಡಗಳು ಅಕ್ರಮ ಎಂದೇ ಪರಿಗಣಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ಭರವಸೆ ನೀಡಿದರು.
‘ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ಅವುಗಳನ್ನು ಬಿಟ್ಟು ಕಾಲುವೆಗಳ ಗಡಿ ಮತ್ತು ಒತ್ತುವರಿಯ ಸಮೀಕ್ಷೆ ನಡೆಸಲಾಗುವುದು. ದೃಢೀಕೃತ ಸರ್ವೆ ನಕ್ಷೆಯನ್ನು ಪಡೆದು ಒತ್ತುವರಿ ತೆರವು ಮಾಡಲಾಗುತ್ತಿದೆ’ ಎಂದರು.
ಒತ್ತುವರಿ ತೆರವುಗೊಳಿಸಿದ ತಕ್ಷಣವೇ ಕಚ್ಚಾ ನಾಲೆ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಅನುದಾನ ಲಭ್ಯತೆ ಆಧರಿಸಿ ಆರ್ಸಿಸಿ ನಾಲೆ ನಿರ್ಮಿಸಿ ತಂತಿ ಬೇಲಿ ಹಾಕಲಾಗುವುದು ಎಂದು ಜಾರ್ಜ್ ತಿಳಿಸಿದರು.