ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನಿವೃತ್ತಿಗೆ ಎರಡು ತಿಂಗಳಿದ್ದಾಗ, ಅಂದರೆ ಮೇಯಲ್ಲಿ ಎರಡು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಅಪರಾಧಕ್ಕೆ ತಮಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೈಲು ಶಿಕ್ಷೆಯನ್ನಾಗಿ ಮಾಪಾರ್ಡು ಮಾಡುವಂತೆ ಕೋರಿ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
2012ರಲ್ಲಿ ಇಂದೋರ್ನಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿದ್ದ ಮೂವರು, ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದರು.
ಪುಣೆಯಲ್ಲಿ 2007ರಲ್ಲಿ 22 ವರ್ಷದ ಯುವತಿಯು ರಾತ್ರಿ ಪಾಳಿಗಾಗಿ ಕಚೇರಿಗೆ ತೆರಳಲು ಕ್ಯಾಬ್ ಹತ್ತಿದ್ದಳು. ಆಗ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ್ದರು.
ಈ ಎರಡು ಪ್ರಕರಣಗಳೊಂದಿಗೆ, ರಾಷ್ಟ್ರಪತಿ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 30 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದಂತಾಗಿದೆ.