ಬೆಂಗಳೂರು: ರಾಜರಾಜೇಶ್ವರಿನಗರ ಸಮೀಪದ ಕೆಂಚೇನಹಳ್ಳಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ರಸ್ತೆ, ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಅವುಗಳಿಗೆ ಹಾಕಿರುವ ಸ್ಲ್ಯಾಬ್ಗಳು ಮುರಿದುಬಿದ್ದಿವೆ. ಕೆಲ ಚರಂಡಿಗಳು ತೆರೆದ ಸ್ಥಿತಿಯಲ್ಲಿದ್ದು, ಅನಾಹುತಕ್ಕೆ ಎಡೆಮಾಡಿಕೊಡುವಂತಿವೆ.
‘ಮಳೆ ಬಂದರೆ ಬಡಾವಣೆಯ ರಸ್ತೆಗಳು ಜಲಾವೃತಗೊಳ್ಳುತ್ತವೆ. ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುವುದಿಲ್ಲ. ನೇರವಾಗಿ ಮನೆಗಳಿಗೆ ನುಗ್ಗುತ್ತದೆ. ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ಕೃಷ್ಣೋಜಿರಾವ್ ಅಳಲು ತೋಡಿಕೊಂಡರು.
‘ಬಡಾವಣೆಯಲ್ಲಿರುವ ಸಮಸ್ಯೆಗಳ ಬಗ್ಗೆ ರಾಜರಾಜೇಶ್ವರಿ ನಗರ ವಾರ್ಡ್ನ ಸಹಾಯಕ ಎಂಜಿನಿಯರ್ಗೆ ದೂರು ನೀಡಲಾಗಿತ್ತು. ಆದರೆ, ಅವರು ಯಾವುದೇ ಸ್ಪಂದನೆ ನೀಡಲಿಲ್ಲ’ ಎಂದು ದೂರಿದರು.
‘ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ, ಅದರ ಪಕ್ಕದಲ್ಲೇ ಚರಂಡಿ ಇದ್ದು, ಸ್ಲ್ಯಾಬ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ’ ಎಂದು ಮಂಜುಳಮ್ಮ ಬೇಸರ ವ್ಯಕ್ತಪಡಿಸಿದರು.