ನವದೆಹಲಿ : ಹಿರಿಯ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಸೋಮವಾರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಕರ್ನಾಟಕದ ಅನಿಲ್ ಕುಂಬ್ಳೆ ಅವರ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 9 ಕಡೆಯ ದಿನವಾಗಿದೆ. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಹೊಂದಿರುವ ಕ್ರಿಕೆಟ್ ಸಲಹಾ ಸಮಿತಿಯು ಜುಲೈ 10 ರಂದು ಕೋಚ್ ಆಯ್ಕೆಗಾಗಿ ಸಂದರ್ಶನ ನಡೆಸ ಲಿದೆ.
ರವಿ ಅವರು 2014ರ ಆಗಸ್ಟ್ ನಿಂದ 2016ರ ಜೂನ್ವರೆಗೆ ತಂಡದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹೋದ ವರ್ಷವೂ ರವಿಶಾಸ್ತ್ರಿ, ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದರು. ಆಗ ಗಂಗೂಲಿ ಅವರು ಶಾಸ್ತ್ರಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಸೌರವ್ ಅವರು ಸಮಿತಿಯ
ಲ್ಲಿರುವ ಕಾರಣ ಭಾರತ ತಂಡದ ಮಾಜಿ ಆಲ್ರೌಂಡರ್ ರವಿ ಅವರು ಕೋಚ್ ಆಗಿ ಆಯ್ಕೆಯಾಗುವುದು ಸುಲಭವಲ್ಲ ಎನ್ನಲಾಗಿದೆ. ಶಾಸ್ತ್ರಿ ಅವರು ನಿರ್ದೇಶಕ ರಾಗಿದ್ದಾಗ 2014ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ತಂಡ ಪ್ರಶಸ್ತಿ ಎತ್ತಿ ಹಿಡಿದಿತ್ತು. ಜೊತೆಗೆ ಏಕದಿನ ವಿಶ್ವಕಪ್ (2015) ಮತ್ತು ವಿಶ್ವ ಟಿ–20 (2016) ಟೂರ್ನಿಗಳಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು.
ಸಿಮನ್ಸ್ ಅರ್ಜಿ: ವೆಸ್ಟ್ ಇಂಡೀಸ್ ತಂಡದ ಮಾಜಿ ಆರಂಭಿಕ ಆಟಗಾರ ಫಿಲ್ ಸಿಮನ್ಸ್ ಅವರೂ ಸೋಮವಾರ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ವಿಂಡೀಸ್ ತಂಡದ ಕೋಚ್ ಆಗಿದ್ದ ಸಿಮನ್ಸ್ ಅವರು ಐರ್ಲೆಂಡ್ ಮತ್ತು ಅಫ್ಗಾನಿಸ್ತಾನ ತಂಡಗಳ ಸಲಹೆಗಾರರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಭಾರತ ತಂಡದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ವೆಂಕಟೇಶ್ ಪ್ರಸಾದ್, ರಿಚರ್ಡ್ ಪೈಬಸ್, ದೊಡ್ಡ ಗಣೇಶ್ ಮತ್ತು ಲಾಲ್ಚಂದ್ ರಜಪೂತ್್ ಅವರೂ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.