ನವದೆಹಲಿ: ‘ಕೋಲ್ಕತ್ತ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅವರ ನಡವಳಿಕೆ ಹಾಗೂ ವರ್ತನೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ನಗೆಪಾಟಲಿಗೆ ಗುರಿ ಮಾಡಿದೆ’ ಎಂದು ಹೇಳಿರುವ ಸುಪ್ರೀಂಕೋರ್ಟ್, ಇವರು ನ್ಯಾಯಾಂಗ ನಿಂದನೆಗೆ ಅರ್ಹರು ಎಂದು ಬುಧವಾರ ಅಭಿಪ್ರಾಯ ಪಟ್ಟಿದೆ.
ಕರ್ತವ್ಯದಲ್ಲಿ ಇರುವ ನ್ಯಾಯಮೂರ್ತಿಯೊಬ್ಬರನ್ನು ಆರು ತಿಂಗಳ ಜೈಲು ಶಿಕ್ಷೆಗೆ ಗುರಿ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ ಎಂದಿರುವ ಕೋರ್ಟ್, ‘ಇದರಿಂದಾಗಿ ನಮ್ಮ ನ್ಯಾಯಾಂಗ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳ ಮಾಧ್ಯಮಗಳ ಗಮನ ಸೆಳೆಯುವಂತಾಯಿತು’ ಎಂದು ವಿಷಾದಿಸಿದೆ.
‘ಕರ್ಣನ್ ಅವರ ಮಾನಸಿಕ ಆರೋಗ್ಯ ಪರೀಕ್ಷೆ ನಡೆಸಿ ಏನಾದರೂ ಸಮಸ್ಯೆಗಳಿದ್ದಲ್ಲಿ ವರದಿ ನೀಡುವಂತೆ ವೈದ್ಯಕೀಯ ಮಂಡಳಿಗೆ ನಾವು ಆದೇಶಿಸಿದ್ದೆವು. ಮಂಡಳಿಯಿಂದ ನಮಗೆ ಇದುವರೆಗೆ ಯಾವುದೇ ವರದಿ ಬಂದಿಲ್ಲ. ಇದನ್ನು ನೋಡಿದರೆ ಕರ್ಣನ್ ಅವರು ಮಾನಸಿಕವಾಗಿ ಆರೋಗ್ಯದಿಂದ ಇದ್ದಾರೆ ಎಂದು ನಮಗೆ ಅನ್ನಿಸುತ್ತದೆ. ಆದ್ದರಿಂದ ಅವರು ಕಾನೂನಿನಿಂದ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕೋರ್ಟ್ ಹೇಳಿದೆ.
ಮೇ 9ರಂದು ಕರ್ಣನ್ ಅವರ ವಿರುದ್ಧ ನೀಡಿರುವ ಈ ತೀರ್ಪನ್ನು ಮಂಗಳವಾರ ವೆಬ್ಸೈಟ್ಗೆ ಸುಪ್ರೀಂಕೋರ್ಟ್ ಅಪ್ಲೋಡ್ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತ್ತು.