ವಿಜಯಪುರ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಆಲಮಟ್ಟಿಯ ಲಾಲ್ಬಹಾದ್ದೂರ್ ಶಾಸ್ತ್ರಿ ಸಾಗರ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಒಳ ಹರಿವೂ ಕಡಿಮೆಯಾಗಿದೆ.
ಬುಧವಾರ ಜಲಾಶಯಕ್ಕೆ ಒಳಹರಿವು ಪ್ರಮಾಣ 40,547 ಕ್ಯುಸೆಕ್ (3.6 ಟಿ.ಎಂ.ಸಿ ಅಡಿ) ಇದ್ದರೆ, ಗುರುವಾರ 29,319 ಕ್ಯುಸೆಕ್ಗೆ (2.6 ಟಿ.ಎಂ.ಸಿ ಅಡಿ) ಇಳಿದಿದೆ.
ಬುಧವಾರ 510.10 ಮೀ ನಷ್ಟಿದ್ದ ಜಲಾಶಯದ ಮಟ್ಟ ಗುರುವಾರ 510.60 ಮೀ ಗೆ ತಲುಪಿದೆ. ನೀರಿನ ಸಂಗ್ರಹ 30.389 ಟಿಎಂಸಿ ಅಡಿಯಿಂದ 32.922 ಟಿಎಂಸಿ ಅಡಿಗೇರಿದೆ. 24 ತಾಸಿನಲ್ಲಿ ಜಲಾಶಯಕ್ಕೆ 2.533 ಟಿಎಂಸಿ ಅಡಿ ನೀರು ಹರಿದು ಬಂದಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ, 24 ಗಂಟೆಗಳ ಅವಧಿಯಲ್ಲಿ ಒಂದು ಟಿ.ಎಂ.ಸಿ. ಅಡಿಯಷ್ಟು ನೀರು ಹರಿದು ಬಂದಿದೆ. ಬುಧವಾರ ಜಲಾಶಯದಲ್ಲಿ 7.672 ಟಿ.ಎಂ.ಸಿ. ಅಡಿ ನೀರಿತ್ತು. ಗುರುವಾರ 8.664 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹ ದಾಖಲಾಗಿದೆ.
ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುತ್ತಿರುವ ಕಾರಣ ಅಣೆಕಟ್ಟೆಯ ಒಳಹರಿವು ಹೆಚ್ಚಾಗಿದ್ದು, ಗುರುವಾರ 11,506 ಕ್ಯುಸೆಕ್ ( 1 ಟಿ.ಎಂ.ಸಿ ಅಡಿ) ಒಳಹರಿವು ಇತ್ತು. ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ಟಿ.ಎಂ.ಸಿ ಅಡಿ ನೀರು ಹರಿದು ಬಂದಿದೆ.