‘ಇಲ್ಲಿನ ಮಕ್ಕಳು ಬಾಲ ಕಾರ್ಮಿಕರಾಗಿ, ಪೋಷಕರ ಕೆಲಸದಲ್ಲಿ ಸಹಾಯಕರಾಗಿ ಸಮಯ ಕಳೆಯುತ್ತಿದ್ದಾರೆ. ಶೈಕ್ಷಣಿಕ ಸೌಲಭ್ಯ ಸೇರಿ ಸರ್ಕಾರದ ಯಾವುದೇ ಸವಲತ್ತುಗಳು ಈ ಮಕ್ಕಳಿಗೆ ದೊರೆತಿಲ್ಲ. ನಗರದಲ್ಲಿರುವ ಈ ಪ್ರದೇಶಗಳತ್ತ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಸುಳಿದಿಲ್ಲ’ ಎಂದು ಆಯೋಗದ ಸದಸ್ಯ ಮರಿಸ್ವಾಮಿ ತಿಳಿಸಿದರು.
‘ಇತ್ತೀಚೆಗೆ ದಾಖಲಾದ ಪೋಕ್ಸೊ ಪ್ರಕರಣದ ಮಗುವನ್ನು ವಿಚಾರಿಸಲು ಕಾಚರಕನಹಳ್ಳಿಯ ಕೊಳೆಗೇರಿಗೆ ಭೇಟಿ ನೀಡಿದಾಗ ಅಲ್ಲಿ ಸುಮಾರು 250 ಮಕ್ಕಳು ಶಾಲೆಗೆ ಹೋಗದಿರುವುದು ತಿಳಿದು ಬಂದಿತು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಮಾಹಿತಿ ನೀಡಿದರು.
‘ಎಚ್ಬಿಆರ್ ಬಡಾವಣೆಯಲ್ಲಿರುವ ಕೊಳೆಗೇರಿಯ ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ ಎಂದು ದೂರಿದ್ದಾರೆ. ಆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು’ ಎಂದರು.
ಅಪೌಷ್ಠಿಕತೆ ತೊಂದರೆ: ಕೇವಲ ಮಕ್ಕಳು ಶಾಲೆಗೆ ಹೋಗದಿರುವುದಷ್ಟೇ ಅಲ್ಲದೆ, ಇಲ್ಲಿರುವ ಗರ್ಭಿಣಿಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. ಸುತ್ತಮುತ್ತ ಯಾವುದೇ ಅಂಗನವಾಡಿಗಳು ಇಲ್ಲದಿರುವುದಿಂದ, ಇಲ್ಲಿನ ಮಹಿಳೆಯರಿಗೆ ಸರ್ಕಾರದ ಸವಲತ್ತುಗಳ ಮಾಹಿತಿ ಇಲ್ಲ. ಈ ಬಗ್ಗೆ ಗಮನಹರಿಸದಿರುವ ಇಲಾಖೆಗಳ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದೆ.