ಕನ್ಯಾಕುಮಾರಿ: ಆರ್ಎಸ್ಎಸ್ನ ಮಾಜಿ ಕಾರ್ಯಕರ್ತ, ಕನ್ನಡಿಗ ಸೀತಾರಾಮ ಕೆದಿಲಾಯ ಅವರ ‘ಭಾರತ ಪರಿಕ್ರಮ ಯಾತ್ರೆ’ ದೇಶದ ದಕ್ಷಿಣದ ತುತ್ತ ತುದಿಯಾದ ಕನ್ಯಾಕುಮಾರಿಯ ಕಡಲ ಕಿನಾರೆಯಲ್ಲಿ ಗುರುಪೂರ್ಣಿಮೆಯ ದಿನವಾದ ಭಾನುವಾರ ಪೂರ್ಣಗೊಂಡಿತು.
ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮುಖಂಡರಾದ ದತ್ತಾತ್ರೇಯ ಹೊಸ
ಬಾಳೆ, ಅಜಿತ್ ಮಹಾಪಾತ್ರ, ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹಾಜರಿದ್ದರು.
ಕೆದಿಲಾಯ ಅವರು 2012ರ ಆಗಸ್ಟ್ 9ರಂದು (ಕೃಷ್ಣ ಜನ್ಮಾಷ್ಟಮಿ) ತಮ್ಮ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಆರಂಭಿಸಿದ್ದರು. ಸುಮಾರು ಐದು ವರ್ಷ ಬಳಿಕ ಈಗ ಯಾತ್ರೆ ಪೂರ್ಣಗೊಂಡಿದೆ.
ಯಾತ್ರೆಯ ಕೊನೆಯ ಭಾಗವಾಗಿ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಿಂದ ಕನ್ಯಾಕುಮಾರಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು.
1,797 ದಿನ ಪಾದಯಾತ್ರೆ ನಡೆಸಿರುವ ಕೆದಿಲಾಯ ಅವರು 23 ರಾಜ್ಯಗಳನ್ನು ಹಾದು ಹೋಗಿದ್ದಾರೆ. 23,100 ಕಿ.ಮೀ ಕ್ರಮಿಸಿರುವ ಅವರು 2,350 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.