ಶಿರಸಿ: ಮಾಜಿ ಸಂಸದ ದೇವರಾಯ ನಾಯ್ಕ (70) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಇಲ್ಲಿನ ಯಲ್ಲಾಪುರ ನಾಕಾ ಸಮೀಪವಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.
1962ರಲ್ಲಿ ಉಳುವವನೇ ಒಡೆಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಪಿಎಸ್ಪಿ) ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಆ ಪಕ್ಷ ಕಾಂಗ್ರೆಸ್ನಲ್ಲಿ ವಿಲೀನಗೊಂಡ ನಂತರ ಕಾಂಗ್ರೆಸ್ನ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
1980ರಲ್ಲಿ ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರದ (ಇಂದಿನ ಉತ್ತರ ಕನ್ನಡ ಕ್ಷೇತ್ರ) ಸಂಸದರಾಗಿ ಆಯ್ಕೆಯಾದರು. 1984, 1989 ಹಾಗೂ 1991ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
1996ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ ಪಕ್ಷದ ಟಿಕೆಟ್ ನಿರಾಕರಿಸುವ ಮೂಲಕ ನಾಯ್ಕ ಗಮನ ಸೆಳೆದಿದ್ದರು.
ಮೃತರ ಅಂತ್ಯಕ್ರಿಯೆ ಮೂಲ ಊರು ಸಿದ್ದಾಪುರ ತಾಲ್ಲೂಕು ಕಾನಸೂರು ಸಮೀಪದ ಗವಿನಗುಡ್ಡದಲ್ಲಿ ಗುರುವಾರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.