ಮಂಗಳೂರು: ಒಂದು ವೇಳೆ ಪ್ರಭಾಕರ ಭಟ್, ಶೋಭಾ ಕರಂದ್ಲಾಜೆ ಅವರನ್ನು ಮುಟ್ಟಿದ್ದೇ ಆದಲ್ಲಿ, ಅದು ಕಾಂಗ್ರೆಸ್ ಶವ ಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಅಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದರು.
ನಿಜವಾದ ಅಪರಾಧಿಗಳನ್ನು ಬಂಧಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಭಾಕರ್ ಭಟ್ ಕಲ್ಲಡ್ಕ, ಶೋಭಾ ಕರಂದ್ಲಾಜೆ ಅವರನ್ನು ಬಂಧಿಸುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಕೆಲಸ ಮಾಡಲು ಆಗುವುದಿಲ್ಲ ಎಂದು ಸ್ವಯಂ ನಿವೃತ್ತಿ ಪಡೆದ ಕೆಂಪಯ್ಯ ಅವರನ್ನು ಕೂರಿಸಿಕೊಂಡು ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಶೋಭಾ ಕರಂದ್ಲಾಜೆ, ಭಟ್ ರನ್ನು ಬಂಧಿಸುವಂತೆ ಕೆಂಪಯ್ಯ ಹೇಳಿದ್ದಾರೆ. ನಾನು ಸವಾಲು ಹಾಕುತ್ತೇನೆ. ಧೈರ್ಯವಿದ್ದರೆ ಮುಟ್ಟಿ ನೋಡಿ. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ ಕಾರ್ಯಕ್ರಮಕ್ಕಾಗಿ ನಿಷೇಧಾಜ್ಞೆ ತೆರವು ಮಾಡಲಾಗುತ್ತದೆ. ಮುಖ್ಯಮಂತ್ರಿ ಹೋಗುವವರೆಗೆ ಶರತ್ ಸಾವಿನ ಸುದ್ದಿಯನ್ನು ಮುಚ್ಚಿಡಲಾಗುತ್ತದೆ ಎಂದ ಅವರು, ಶರತ್ ಗುರುವಾರ ಮಧ್ಯರಾತ್ರಿಯೆ ಮೃತಪಟ್ಟಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ತಿಳಿದಿರಲಿಲ್ಲವೇ? ಶರತ್ ಸಾವಿನ ಸುದ್ದಿ ಮುಚ್ಚಿಟ್ಟು ಕಾಂಗ್ರೆಸ್ ನಾಯಕರು, ಸಮಾವೇಶದ ಸಂಭ್ರಮ ಆಚರಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.