ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯ ಮಾಡಿದ ಆರೋಪದಡಿ ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರಿಂದ ಡೈರಿ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಈ ಕುರಿತಂತೆ ಆದಾಯ ತೆರಿಗೆ ಇಲಾಖೆಯ ಬೆಂಗಳೂರು ವಿಭಾಗ ದಾಖಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ನಡೆಸಿದರು.
‘ಐ.ಟಿ.ಅಧಿಕಾರಿಗಳು ನನ್ನ ಮನೆಯಿಂದ ಯಾವುದೇ ಡೈರಿ ವಶಪಡಿಸಿಕೊಂಡಿಲ್ಲ’ ಎಂದು ಗೋವಿಂದರಾಜು 2016ರ ಮಾರ್ಚ್ನಲ್ಲಿ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ ಪೊಲೀಸರು ಐ.ಟಿ ವಿಭಾಗದ ತನಿಖಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ‘ಡೈರಿಯನ್ನು ವಶಕ್ಕೆ ನೀಡಬೇಕು’ ಎಂದು ಕೋರಿದ್ದಾರೆ.
‘ಪೊಲೀಸರ ಈ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದ್ದು ತನಿಖೆಗೆ ಅಡ್ಡಿ ಉಂಟು ಮಾಡುವಂತಿದೆ. ಆದ್ದರಿಂದ ತನಿಖೆಗೆ ತಡೆ ನೀಡಬೇಕು’ ಎಂದು ಐ.ಟಿ ತನಿಖಾಧಿಕಾರಿ ಕೋರಿದ್ದಾರೆ.