ತುಮಕೂರು: ‘ಮಹದಾಯಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ, ಕೋರ್ಟ್ ಹೊರಗಡೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ಗೋವಾ ರಾಜ್ಯ ಜಲಸಂಪನ್ಮೂಲ ಸಚಿವರು ನೀಡಿರುವ ಹೇಳಿಕೆ ಸರಿಯಲ್ಲ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರ ಚುನಾವಣೆ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಸರ್ಕಾರವು ಮಹಾದಾಯಿ ವಿಚಾರದಲ್ಲಿ ಅನುಸರಿಸುತ್ತಿರುವ ನಡೆಯ ಬಗ್ಗೆ ಆ ಸಚಿವರು ಹಗುರವಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ’ ಎಂದರು.
‘ಒಬ್ಬ ಜವಾಬ್ದಾರಿಯುತ ಸಚಿವರಾಗಿ ಪಕ್ಕದ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಆ ಜವಾಬ್ದಾರಿ ಮರೆತು ಹೇಳಿಕೆ ನೀಡಿರುವುದು ಆ ವ್ಯಕ್ತಿಯ ವ್ಯಕ್ತಿತ್ವ ಎಂತಹುದು ಎಂಬುದನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅವರ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಸೂಕ್ತ ಉತ್ತರ ನೀಡುತ್ತೇವೆ’ ಎಂದರು.
ಕರ್ನಾಟಕದೊಂದಿಗೆ ರಾಜಿ ಇಲ್ಲ:
ಮಹದಾಯಿ ನದಿ ನೀರು ಸಂಬಂಧ ಕರ್ನಾಟಕದೊಂದಿಗೆ ಯಾವುದೇ ರಾಜಿ ಅಥವಾ ಕೋರ್ಟ್ ಹೊರಗಿನ ಚರ್ಚೆಯಿಲ್ಲ. ಇದು ಗೋವಾ ಸರ್ಕಾರ ಹಾಗೂ ನಮ್ಮ ಇಲಾಖೆ ತೆಗೆದುಕೊಂಡಿರುವ ಅಧಿಕೃತ ನಿರ್ಧಾರ ಎಂದು ಗೋವಾದ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಪತ್ರದಲ್ಲಿ ಆರೋಪಿಸಿದ್ದಾರೆ.
ಒಂದು ಕಡೆ ಕೋರ್ಟ್ ಹೊರಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕರ್ನಾಟಕ ನಮ್ಮ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುತ್ತದೆ. ಮತ್ತೊಂದು ಕಡೆ ಹಿಂಬದಿಯಲ್ಲಿ ಕೀಳುಮಟ್ಟದ ತಂತ್ರಗಾರಿಕೆ ರೂಪಿಸುತ್ತಿದೆ. ಕೋರ್ಟ್ನಲ್ಲಿ ಪ್ರಕರಣ ಮುಂದುವರಿಸುವುದಾಗಿ ಪತ್ರಮುಖೇನ ಕಿಡಿಕಾರಿದ್ದಾರೆ.