ದೂಳಿನಿಂದ ಮುಕ್ತಗೊಳಿಸಿ
ಯಲಹಂಕ ವಲಯ, ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ಪುಟ್ಟೇನಹಳ್ಳಿ ಕೆ.ಎಚ್.ಬಿ. ಕಾಲೋನಿಗೆ ಹೊಂದಿಕೊಂಡಿರುವ ಗಾಲಿ ಮತ್ತು ಅಚ್ಚು ಕಾರ್ಖಾನೆಯ ‘ಡಂಪಿಂಗ್ ಯಾರ್ಡ್’ ಸುತ್ತಲೂ ಲಾರಿಗಳು ರಭಸವಾಗಿ ಓಡಾಡುತ್ತಿರುತ್ತವೆ. ಈ ಸ್ಥಳದಲ್ಲಿ ವಾಸಿಸುವ 100ಕ್ಕೂ ಹೆಚ್ಚು ಮನೆಗಳಿಗೆ ಪ್ರತಿ ದಿವಸ ಕಬ್ಬಿಣ ಮಿಶ್ರಿತ ದೂಳು ಬೀಳುತ್ತಿರುತ್ತದೆ. ನಿಧಾನವಾಗಿ ವಾಹನಗಳು ಓಡಾಡಿದರೆ ದೂಳು ಆಗುವುದಿಲ್ಲ. ಇದರಿಂದ ಪರಿಸರಕ್ಕೆ ತುಂಬಾ ತೊಂದರೆಯಾಗುತ್ತದೆ.
ಇತ್ತೀಚೆಗಂತೂ ದೂಳು ಹೆಚ್ಚಾಗಿದೆ. ಇದರಿಂದ ಈ ಭಾಗದಲ್ಲಿ ವಾಸಿಸುವುದೇ ದುಸ್ತರವಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ, ಗಾಲಿ ಮತ್ತು ಅಚ್ಚು ಕಾರ್ಖಾನೆಗೆ (ಯಲಹಂಕ) ಸೂಕ್ತ ನಿರ್ದೇಶನ ನೀಡಿ, ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
–ಎಂ. ಮಲ್ಲೇಶಯ್ಯ
ಪ್ರಿಪೇಯ್ಡ್ ಆಟೊ ಬೇಕು
ಸಿಟಿಮಾರ್ಕೆಟ್ ಹತ್ತಿರವಿರುವ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವವರಲ್ಲಿ ಬಡವರೇ ಹೆಚ್ಚು. ಸಂಚಾರಕ್ಕೆ ಸಾಕಷ್ಟು ಆಟೊಗಳಿದ್ದರೂ ಅನುಕೂಲಕರವಾಗಿಲ್ಲ, ಏಕೆಂದರೆ ಕರೆದಲ್ಲಿ ಬರುವದಿಲ್ಲ, ಮೀಟರ್ ಹಾಕುವುದಿಲ್ಲ, ಕೇಳಿದಷ್ಟು ಹಣ ನೀಡಬೇಕು. ಅಸಹಾಯಕರಾಗಿ ಹೆಚ್ಚು ಹಣ ನೀಡಬೇಕು. ಈ ಸಮಸ್ಯೆಗೆ ಪರಿಹಾರವೆಂದರೆ, ಇಲ್ಲಿ ಪ್ರಿಪೇಯ್ಡ್ ವ್ಯಾಪ್ತಿಯ ಆಟೊ, ಟ್ಯಾಕ್ಸಿ ನಿಲ್ದಾಣ ಆರಂಭಿಸುವುದು. ಇದರಿಂದ ರೋಗಿ, ಅವರ ಸಂಬಂಧಿಗಳಲ್ಲದೆ, ವೈದ್ಯರು, ಸಿಬ್ಬಂದಿ, ಹಿರಿಯ ನಾಗರಿಕರಿಗೂ ಅನೂಕುಲವಾಗುತ್ತದೆ.
-ಡಾ.ಎಂ.ಡಿ.ಸೂರ್ಯಕಾಂತ
ಮೆಟ್ರೊ ಸ್ಟಾಪ್ ಕೊಡಿ
ಯಲಹಂಕದಿಂದ ಕೆಂಗೇರಿ ಕಡೆ ಹೊರಡುವ 401 ನಂಬರಿನ ಬಿಎಂಟಿಸಿ ಬಸ್ನಲ್ಲಿ ಪ್ರತಿನಿತ್ಯ ನೂರಾರು ಮಂದಿ ಪ್ರಯಾಣಿಸುತ್ತಾರೆ. ಇದರಲ್ಲಿ ಕಚೇರಿ, ಶಾಲಾ–ಕಾಲೇಜುಗಳಿಗೆ ಮೆಟ್ರೊದಲ್ಲಿ ತೆರಳುವ ಜನರೂ ಇದ್ದಾರೆ. ಆದರೆ, 401 ಬಸ್ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊ ನಿಲ್ದಾಣದ ಬಳಿ ನಿಲ್ಲಿಸದೇ ಇಸ್ಕಾನ್ ಬಳಿ ಸ್ಟಾಪ್ ನೀಡುತ್ತಿದೆ.
ಈ ಬಗ್ಗೆ ಆ ಬಸ್ನ ಕಂಡಕ್ಟರ್, ಡ್ರೈವರ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ನಿಯಮದ ಪ್ರಕಾರ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊ ಬಳಿ ಸ್ಟಾಪ್ ಕೊಡಲು ಆಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ, ಸಂಬಂಧಿಸಿದ ಬಿಎಂಟಿಸಿ ಅಧಿಕಾರಿಗಳು ಇನ್ನು ಮುಂದೆಯಾದರೂ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊ ಬಳಿ ಸ್ಟಾಪ್ ಕೊಡಲು ವ್ಯವಸ್ಥೆ ಮಾಡಲಿ.
–ಶಿಲ್ಪಾ, ಯಶವಂತಪುರ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.