ಬೆಂಗಳೂರು: ನೀವು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಿವಾಸಿಯೇ? ನಿಮ್ಮ ವಾರ್ಡ್ನಲ್ಲಿ ಕಸ ವಿಲೇವಾರಿ ಸಮಸ್ಯೆ ಇದೆಯೇ? ರಸ್ತೆಗಳು ಹದಗೆಟ್ಟಿವೆಯೇ? ಹಾಗಿದ್ದರೆ ಇದೇ 16ರಂದು ಆರ್.ಟಿ.ನಗರ ಪೊಲೀಸ್ ನಿಲ್ದಾಣ ಬಳಿಯ ಎಚ್.ಎಂ.ಟಿ. ಆಟದ ಮೈದಾನಕ್ಕೆ ಬನ್ನಿ. ವಾರ್ಡ್ನ ಅಭಿವೃದ್ಧಿಯಲ್ಲಿ ಕೈಜೋಡಿಸಲು ನಿಮಗೆ ಸಿಗಲಿದೆ ಅಪೂರ್ವ ಅವಕಾಶ.
ಹೆಬ್ಬಾಳ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡ್ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಆಶ್ರಯದಲ್ಲಿ ಇದೇ 16ರಂದು ಅಲ್ಲಿ ‘ಜನಸ್ಪಂದನ–ಸಿಟಿಜನ್ಸ್ ಫಾರ್ ಚೇಂಜ್’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಾಸಕ ವೈ.ಎ.ನಾರಾಯಣಸ್ವಾಮಿ, ವಿವಿಧ ವಾರ್ಡ್ಗಳ ಪಾಲಿಕೆ ಸದಸ್ಯರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬಿಡಿಎ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಈ ಕ್ಷೇತ್ರದ ವ್ಯಾಪ್ತಿಯ ಸಂಚಾರ, ಉದ್ಯಾನ, ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರು ಪೂರೈಕೆ ವ್ಯತ್ಯಯ ಮುಂತಾದ ಕುಂದುಕೊರತೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು.
ಕುಂದುಕೊರತೆಗಳ ಬಗ್ಗೆ ಗಮನ ಸೆಳೆಯಲು ಬಯಸುವವರು 16ರಂದು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಅವರಿಗೆ ಬೆಳಿಗ್ಗೆ 10ರಿಂದ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸಲಾಗುತ್ತದೆ
ಸಮಸ್ಯೆಗಳ ಬಗ್ಗೆ ಇ–ಮೇಲ್ ( janaspandana@printersmysore.co.in) ಕೂಡ ಮಾಡಬಹುದು. ಟ್ವಿಟರ್ #PVJanaspandana ಮೂಲಕವೂ ಅನಿಸಿಕೆ ಹಂಚಿಕೊಳ್ಳಬಹುದು. ಮಾಹಿತಿಗೆ 9902335932 (ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಕರೆ ಮಾಡಬಹುದು).