ಶಿರಡಿ: ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಶಿರಡಿಯಲ್ಲಿ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾನುವಾರ ಉದ್ಘಾಟಿಸಿದರು.
ಕೋವಿಂದ್ ಅವರಿದ್ದ ವಿಮಾನ ಬೆಳಿಗ್ಗೆ 10.30ಕ್ಕೆ ಶಿರಡಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ನಂತರ ಅವರು ಅಧಿಕೃತವಾಗಿ ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ವಾಣಿಜ್ಯ ಉದ್ದೇಶದ ವಿಮಾನಗಳ ಕಾರ್ಯಾಚರಣೆಯೂ ಭಾನುವಾರವೇ ಆರಂಭವಾಗಿದೆ.
ಮುಂಬೈನಿಂದ 238 ಕಿ.ಮೀ ದೂರದಲ್ಲಿರುವ ಶಿರಡಿಯು ದೇಶದ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಲ್ಲಿ ಒಂದು. ಸಾಯಿಬಾಬಾ ಮಂದಿರದ ಉಪಸ್ಥಿತಿಯಿಂದಾಗಿ ದೇಶದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು ಎಂಬ ಹೆಗ್ಗಳಿಕೆಯೂ ಇದಕ್ಕಿದೆ.
₹350 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಿಮಾನ ನಿಲ್ದಾಣಕ್ಕೆ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ₹50 ಕೋಟಿ ನೀಡಿದೆ. ಈ ವರ್ಷ ಸಾಯಿಬಾಬಾ ಅವರ ಪುಣ್ಯತಿಥಿಯ ಶತಮಾನೋತ್ಸವ ಆಚರಿಸಲಾಗುತ್ತಿದೆ.
ರಾಷ್ಟ್ರಪತಿ ಹುಟ್ಟುಹಬ್ಬ: ಈ ಮಧ್ಯೆ, ಕೋವಿಂದ್ ಅವರು ಭಾನುವಾರ 72ನೇ ಹುಟ್ಟುಹಬ್ಬ ಆಚರಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ.