ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣವಾಗಿ ಭೀಷ್ಮಕೆರೆ ಅಭಿವೃದ್ಧಿ

Last Updated 2 ಅಕ್ಟೋಬರ್ 2017, 6:56 IST
ಅಕ್ಷರ ಗಾತ್ರ

ಗದಗ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆ ತುಂಬಿ ಕೋಡಿ ಹರಿದಿದೆ. ಕಳೆದ ಎರಡೂವರೆ ತಿಂಗಳಿಂದ ತುಂಗಭದ್ರಾ ನದಿ ನೀರನ್ನು ಬಿಡಲಾಗಿದ್ದು, 103 ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಪರಿಸರ ಪ್ರೇಮಿಗಳಲ್ಲಿ ಹರ್ಷ ಮೂಡಿದೆ.

ನೈಸರ್ಗಿಕವಾಗಿ, ಮಳೆಯಾಗಿ ಕೆರೆ ತುಂಬಿದ್ದು ಹಲವು ದಶಕಗಳ ಹಿಂದೆ. 0.22 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಕೆರೆ ಹೊಂದಿದೆ. ಇದೀಗ ಕೃತಕವಾಗಿ ನೀರು ಹರಿಸಿ ಕೆರೆ ತುಂಬಿಸಲಾಗಿದೆ. ಒಂದೂವರೆ ವರ್ಷದ ಹಿಂದೆಯೇ ಕೆರೆಯ ಹೂಳು ತೆಗೆದಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿದೆ. ಸದ್ಯ 250 ದಶಲಕ್ಷ ಲೀಟರ್‌ ನೀರು ಕೆರೆಯಲ್ಲಿ ಸಂಗ್ರಹವಾಗಿದೆ.

60 ಕಿ.ಮೀ. ದೂರದಿಂದ ಕೆರೆಗೆ ನೀರು: 60 ಕಿ.ಮೀ. ದೂರದಲ್ಲಿರುವ ತುಂಗಭದ್ರಾ ನದಿ ನೀರನ್ನು ಹಮ್ಮಿಗಿ ಬ್ಯಾರೇಜ್ ಮಾರ್ಗವಾಗಿ ಪೈಪ್‌ ಮೂಲಕ ಗದುಗಿಗೆ ತರಲಾಗುತ್ತಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ತುಂಗಭದ್ರಾ ನೀರನ್ನು ಮೂರು ಹಂತಗಳಲ್ಲಿ ಲಿಫ್ಟ್ ಮಾಡಿ ಭೀಷ್ಮ ಕೆರೆಯನ್ನು ತುಂಬಿಸಲಾಗಿದೆ.

ಅಂತರ್ಜಲ ಮಟ್ಟ ವೃದ್ಧಿ: ‘2006ರಲ್ಲಿ ಭಿಷ್ಮ ಕೆರೆಗೆ ತುಂಗಭದ್ರಾ ನೀರು ಹರಿಸಲು ನಗರಸಭೆ ವಿಫಲ ಯತ್ನ ನಡೆಸಿತ್ತು. ಆದರೆ, ಮಳೆ ಕೊರತೆಯಿಂದ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿದ್ದರಿಂದ ಆ ಕಾರ್ಯ ಕೈಬಿಡಲಾಗಿತ್ತು. ದಶಕದ ನಂತರ ಭೀಷ್ಮ ಕೆರೆಗೆ 2016ರ ಆಗಸ್ಟ್‌ ಮತ್ತು 2017ರ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ತುಂಗಭದ್ರಾ ನದಿಯಿಂದ ನೀರು ಬಿಡಲಾಗಿದೆ. ನಗರವಾಸಿಗಳಲ್ಲಿ ಸಂತಸ ತಂದಿದೆ.

ಕೆರೆಯ ಒಡಲು ತುಂಬಿದ ಹಿನ್ನೆಲೆಯಲ್ಲಿ ಅದರ ಫಲಗಳೂ ಕಂಡುಬಂದಿವೆ. ಕೆರೆ ತಟದ ಪ್ರದೇಶಗಳಾದ ಜೈನ ಕಾಲೊನಿ, ಅಬ್ಬಿಗೇರಿ ಕಂಪೌಂಡ್‌ ಹಾಗೂ ಪೊಲೀಸ್‌ ಕ್ವಾಟರ್ಸ್‌, ಜನತಾ ಕಾಲೊನಿ, ಡಂಬಳನಾಕಾ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಹೆಚ್ಚಳವಾಗಿದೆ. ಬತ್ತಿ ಹೋಗಿದ್ದ ಬಹುತೇಕ ಕೊಳವೆಬಾವಿಗಳಿಗೆ ಮರುಜೀವ ಬಂದಿದೆ.

‘ನಗರಸಭೆಯಿಂದ ತುಂಗಭದ್ರಾ ನೀರಿನಿಂದ ಕೆರೆಯನ್ನು ತುಂಬಿಸಿರುವುದು ಒಳ್ಳೆಯ ಕಾರ್ಯ. ಎರಡು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿರುವ ಕೊಳವೆಬಾವಿಯಲ್ಲಿ ಮೂರ್ನಾಲ್ಕು ಬಿಂದಿಗೆ ನೀರು ಬರಬೇಕೆಂದರೆ ಹೆಚ್ಚಾಗಿತ್ತು. ಆದರೆ, ಸದ್ಯ ಸಾಕಷ್ಟು ನೀರು ಬರುತ್ತಿದೆ. ಕೆರೆ ತುಂಬಿದಾಗೊಮ್ಮೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಹೇಳುತ್ತಾರೆ ಅಬ್ಬಿಗೇರಿ ಕಂಪೌಂಡ್‌ನ ನಿವಾಸಿ ಆರ್.ಎಸ್.ಬಸವರಾಜ.

‘ಭೀಷ್ಮ ಕೆರೆಯ ಆವರಣದಲ್ಲಿ ತೂಗು ಸೇತುವೆ, ಸಂಗೀತ ಕಾರಂಜಿ, ವಾಕಿಂಗ್‌ ಪಥ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT