ಮೇಲುಕೋಟೆ: ‘ಇಲ್ಲಿಗೆ ಸಮೀಪದ ಹೊಸಕೆರೆಯನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲು ₹ 1 ಕೋಟಿ ಬಿಡುಗಡೆ ಮಾಡಿಸಲಾಗುವುದು’ ಎಂದು ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
ಅವರು ಹಲವಾರು ವರ್ಷದ ನಂತರ ತುಂಬಿ ಕೋಡಿಬಿದ್ದಿರುವ ಮೇಲುಕೋಟೆ ಬೆಟ್ಟದ ತಳಭಾಗದಲ್ಲಿರುವ ಹೊಸಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು.
ಕೆ.ಆರ್.ಪೇಟೆ ತಾಲ್ಲೂಕಿನಿಂದ ಹೇಮಾವತಿ ಕಾಲುವೆಯ ಸಂಪರ್ಕವನ್ನು ಹೊಸಕೆರೆಗೆ ಕಲ್ಪಿಸುವ ಮೂಲಕ ಹೊಸಕೆರೆ ಸೇರಿದಂತೆ ಹಲವು ಕೆರೆಗಳ ಪುನಶ್ಚೇತನಕ್ಕೆ ಶ್ರಮಿಸಲಾಗುತ್ತಿದೆ. ಪ್ರವಾಸಿಗರಿಗೆ ಮುದ ನೀಡುವ ಹೊಸಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ₹ 50 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ನಿರ್ವಹಿಸಲಾಗಿದೆ. ಇದರಿಂದ ಕದಲಗೆರೆ, ದೊಡಿಘಟ್ಟ ಜಕ್ಕನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೃಷಿಗೆ ಅನುಕೂಲವಾಗಿದೆ ಎಂದರು.
ಅರಣ್ಯ ಇಲಾಖೆಯ ಸಹಯೋಗದಲ್ಲಿ ಇಲ್ಲಿ ಪ್ರವಾಸಿ ಆಕರ್ಷಣೆಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬೋಟಿಂಗ್ ವ್ಯವಸ್ಥೆ ಸಹ ಕಲ್ಪಿಸಲಾಗುತ್ತದೆ ಎಂದರು.
ಜಿ.ಪಂ ಸದಸ್ಯ ತ್ಯಾಗರಾಜು, ಹೊಸಕೆರೆಯನ್ನು ಅಭಿವೃದ್ಧಿ ಪಡಿಸಿದಂತೆ ಜಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇತರ ಗ್ರಾಮಗಳ ಕೆರೆಗಳ ಅಭಿವೃದ್ಧಿಗೂ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈತ ಮುಂಖಡ ಕೆ.ಟಿ.ಗೋವಿಂದೇಗೌಡ, ಹೊಸಕೋಟೆ ವಿಜಯಕುಮಾರ, ಉದ್ಯಮಿ ಕನಗೋನಹಳ್ಳಿ ಪರಮೇಶ್ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶೋಭಾ, ರಾಮೇಗೌಡ, ಮೇಲುಕೋಟೆ ಗ್ರಾ.ಪಂ ಸದಸ್ಯ ಸತೀಶ್ ಇದ್ದರು.